ಹನಗೋಡು: ಹನಗೋಡು ಹೋಬಳಿಯ ಹೈರಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹದೇಶ್ವರ ದೇವಸ್ಥಾನವನ್ನು ನೂರಾರು ಆಸ್ತಿಕರ ಸಮ್ಮುಖದಲ್ಲಿ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಬುಧವಾರ ಉದ್ಘಾಟಿಸಲಾಯಿತು.
ಎರಡು ದಿನಗಳ ಕಾಲ ದೇವಾಲಯದ ಆವರಣದಲ್ಲಿ ಬೆಳಿಗಿನಿಂದ ವಿಶೇಷ ಹೋಮ ಸೇರಿದಂತೆ
ಪೂಜಾ ಕಾರ್ಯಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡಸಲಾಯಿತು.
ಧಾರ್ಮಿಕ ಸಭೆಯಲ್ಲಿ ಮಾತನಾಡಿ ಶಾಸಕ ಜಿಡಿ ಹರೀಶ್ ಗೌಡ ಮಾತನಾಡಿ ಭಕ್ತರ ಮಾನಸಿಕ ನೆಮ್ಮದಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ. ಎಲ್ಲೆಡೆ ಭಗವಂತ ಇದ್ದಾನೆ ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿರ್ಮಿತವಾದ ನಮ್ಮ ಬದುಕು ಸುಖ ಸಂತೋಷ್ ಕಾಣುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕಿದ್ದು, ಈ ದಿಸೆಯಲ್ಲಿ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವುಗಳು ನಡೆಯಬೇಕಿದೆ. ವಿಜ್ಞಾನದಿಂದ ಇಂದು ನಮ್ಮಗಳ ಬದುಕು ಅರಳುವ ಬದಲು ನರಳುತ್ತಿದ್ದು, ಎಷ್ಟೇ ಸೌಲಭ್ಯಗಳಿದ್ದರೂ ಸಹ ಮನಃಶಾಂತಿ ಇಲ್ಲದಂತಾಗಿದೆ. ಈ ದಿಸೆಯಲ್ಲಿ ಧ್ಯಾನ ಹಾಗೂ ದೇವತಾ ಕಾರ್ಯಗಳಿಂದ ನಮ್ಮನ್ನು ನಾವು ಅರ್ಥ ಮಾಡಿಕೊಂಡು ನೆಮ್ಮದಿ ಕಾಣಲು ಸಹಕಾರಿಯಾಗುತ್ತವೆ. ಇಂದು ಗ್ರಾಮಸ್ಥರು ನಿರ್ಮಿಸಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯವು ಸುತ್ತಮುತ್ತಲಿನ ಗ್ರಾಮಸ್ಥರ ಧ್ಯಾನ ಮಂದಿರದ ಜೊತೆಗೆ ಭಕ್ತಿಯ ತಾಣವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಸಭೆಯಲ್ಲಿ ಮಾಜಿ ಸಚಿವ ಸಿ ಎಚ್ ವಿಜಯಶಂಕರ್, ಜಿ.ಪಂ.ಮಾಜಿ ಸದಸ್ಯ ಅಮಿತ್ ವಿ ದೇವರ ಹಟ್ಟಿ, ನಗರಸಭಾ ಸದಸ್ಯ ಗಣೇಶ್ ಕುಮಾರಸ್ವಾಮಿ, ತಾಲೂಕು ಕುರುಬರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿಕೆ ಕುನ್ನೇಗೌಡ ಮಾತನಾಡಿದರು.
ಧಾರ್ಮಿಕ ಸಭೆಯಲ್ಲಿ ಗೌಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಕೆ ಆರ್ ನಗರ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ
ತಾಲೂಕು ಕುರುಬ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಮಂಡ್ಯ ಮಹೇಶ್ ಪ್ರಧಾನ ಕಾರ್ಯದರ್ಶಿ ವಾಸೇಗೌಡ ಡಾ. ಲೋಹಿತ್, ಡಾ. ಭರತ್ ಕುಮಾರ್ ಮುಖಂಡ ಜಿ ಸ್ವಾಮಿ , ಪರಶುರಾಮ್, ಮಂಜು ಸೇರಿದಂತೆ ದೇವಾಲಯ ಸಮಿತಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.