ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಹಪಾಠಿಯ ಆರೋಗ್ಯ ವಿಚಾರಿಸಲು ಆತನ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಮುಸ್ತಾಫ ಪೆರಿಯಡ್ಕ ಹಾಗೂ ಮುಸ್ತಾಫ ಬಂಧಿತ ಆರೋಪಿಗಳು.
ದೂರುದಾರ ವಿದ್ಯಾರ್ಥಿಯು ಪದವಿ ವ್ಯಾಸಂಗ ಮಾಡುತ್ತಿದ್ದು ಇವರ ಸಹಪಾಠಿ ವಿದ್ಯಾರ್ಥಿಯೊಬ್ಬ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದಾರೆ. ಹೀಗಾಗಿ ಆತನ ಆರೋಗ್ಯ ವಿಚಾರಿಸುವ ಸಲುವಾಗಿ ದೂರುದಾರರು ತನ್ನ ಇತರ 9 ಸಹಪಾಠಿ ವಿದ್ಯಾರ್ಥಿ/ವಿದ್ಯಾರ್ಥಿನಿಯರೊಂದಿಗೆ ಆತನ ಮನೆಗೆ ತೆರಳುತ್ತಿದ್ದಾರೆ. ದಿನಾಂಕ 06-11-2025 ರ ಬೆಳಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಸೈಕಲಲ್ಲಿ ಇಬ್ಬರು ವ್ಯಕ್ತಿಗಳು ಬಂದು ಈ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸಿದ್ದಾರೆ. ಆ ಬಳಿಕ ಮೋಟಾರ್ ಸೈಕಲಲ್ಲಿದ್ದ ಆರೋಪಿಗಳಾದ ಮುಸ್ತಾಫ ಮತ್ತು ಸಹಸವಾರ ಮುಸ್ತಾಫ ಪೆರಿಯಡ್ಕ ಎಂಬವರು ಈ ವಿದ್ಯಾರ್ಥಿಗಳ ಹೆಸರು, ಕಾಲೇಜ್ ಹಾಗೂ ಊರಿನ ಬಗ್ಗೆ ವಿಚಾರಿಸಿ, ವಿಭಿನ್ನ ಕೋಮುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಜೊತೆಗೆ ತೆರಳುತ್ತಿರುವ ಬಗ್ಗೆ ತಕರಾರು ತೆಗೆದು, ಕೋಮುದ್ವೇಷದಿಂದ ಅವಾಚ್ಯವಾಗಿ ಬೈದು, ಓರ್ವ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 107/2025, ಕಲಂ: 126(2), 352, 351(2), 115(2), 353(2) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿತರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರಿದಿದೆ.




