ಬೆಂಗಳೂರು: ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ ನೀಡಿರುವ ನಿರ್ಧಾರ ಹೊಸದು ಅಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, “2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರದಲ್ಲಿ ರಚನೆಯಾದ ಸಂಪುಟ ಉಪ ಸಮಿತಿ ಈ ಶಿಫಾರಸು ಮಾಡಿತ್ತು. ಈಗ ಅದರ ಆಧಾರದಲ್ಲಿ ಶೇ.10 ಮೀಸಲಾತಿ ಶೇ.15ಕ್ಕೆ ಹೆಚ್ಚಿಸಲಾಗಿದೆ,” ಎಂದು ಹೇಳಿದರು.
ಸಾಚಾರ್ ಸಮಿತಿ ವರದಿಯಂತೆ ಕೇಂದ್ರ ಸರಕಾರದಲ್ಲಿ ಈಗಾಗಲೇ ಶೇ.15 ಮೀಸಲಾತಿಯು ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಇದೆ. ಅದನ್ನು ರಾಜ್ಯದಲ್ಲೂ ಅನುಸರಿಸಲಾಗಿದೆ ಎಂದರು.
ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಬಡ ಕುಟುಂಬಗಳಿದ್ದು, ವಸತಿ ರಹಿತರ ಪ್ರಮಾಣವೂ ಹೆಚ್ಚು. ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಿಸಲು ಬೇಡಿಕೆಗಳಾಗಿತ್ತು.
2021ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವೂ ಶೇ.15 ಮೀಸಲಾತಿಗೆ ಶಿಫಾರಸು ಮಾಡಿತ್ತು. ಇವೆಲ್ಲಾ ವಿಚಾರ ತಿಳಿಸಿಕೊಳ್ಳದೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದು ಅಸಾಧುವಾಗಿದೆ ಎಂದು ಖಾನ್ ಸ್ಪಷ್ಟಪಡಿಸಿದರು.