ಮಡಿಕೇರಿ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ನಗರದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ” ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ- ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ 31 ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಏರ್ಪಡಿಸಲಾಗಿತ್ತು.
ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವಿದ್ಯಾರ್ಥಿಗಳು ಕೇಂದ್ರ ವಿಷಯದಡಿ ತಮ್ಮ ಸುತ್ತಲಿನ ಪರಿಸರದಲ್ಲಿ ಸಮೀಕ್ಷೆ ಕೈಗೊಂಡು ವೈಜ್ಞಾನಿಕ ಯೋಜನಾ ಪ್ರಬಂಧ ಸಿದ್ದಪಡಿಸಿ ಉತ್ತಮವಾಗಿ ಪ್ರಬಂಧ ಮಂಡಿಸಿದ ಕೊಡಗು ಜಿಲ್ಲೆಯ ಇಬ್ಬರು ಬಾಲ ವಿಜ್ಞಾನಿಗಳು 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಗೊಂಡಿದ್ದಾರೆ. ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಹಾಗೂ ಮಡಿಕೇರಿ ನಗರದ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಶ್ರೀಯಾ ಎಂ.ಕಿರಣ್ ಬಾಲ ವಿಜ್ಞಾನಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ವಿಜ್ಞಾನ ಸಮಾವೇಶದ ಜಿಲ್ಲಾ ಸಮನ್ವಯಾಧಿಕಾರಿ ಜಿ.ಶ್ರೀಹರ್ಷ ತಿಳಿಸಿದ್ದಾರೆ.
ವೈಜ್ಞಾನಿಕ ಸಂಶೋಧನೆಯ ಪ್ರಬಂಧದ ವಿವರಗಳು: ಪ್ರಬಂಧ ಮಂಡಿಸಿದ ತಂಡದ ನಾಯಕಿ, ತಂಡದ ಸದಸ್ಯರು, ವಿದ್ಯಾರ್ಥಿಗಳು ಮಂಡಿಸಿದ ವಿಷಯ ಹಾಗೂ ಮಾರ್ಗದರ್ಶಿ ಶಿಕ್ಷಕರು ನಗರ ಕಿರಿಯ ವಿಭಾಗ: ಮಡಿಕೇರಿ ನಗರದ ಕೊಡಗು ವಿದ್ಯಾಲಯದ 7 ನೇ ತರಗತಿಯ ಶ್ರೀಯಾ ಕಿರಣ್( ತಂಡದ ನಾಯಕಿ) ಮತ್ತು ಶ್ಲೋಕ್ ಅಯ್ಯಪ್ಪ (ತಂಡದ ಸಹ ಸದಸ್ಯ)
ಮಂಡಿಸಿದ ವಿಷಯ : ಜೇನು ಕೃಷಿಯ ಮಹತ್ವ : ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ, ಗ್ರಾಮಾಂತರ ಕಿರಿಯ ವಿಭಾಗ: ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ತಂಡದ 8 ನೇ ತರಗತಿಯ ಎ..ಎಸ್.ಶ್ರೀಶಾ (ತಂಡದ ನಾಯಕಿ) ಮತ್ತು ಟಿ.ಎಸ್.ಶೃಜನ್ಯ (ತಂಡದ ಸದಸ್ಯೆ), ಮಂಡಿಸಿದ ವಿಷಯ: ಕಲುಷಿತಗೊಳ್ಳುತ್ತಿರುವ ಜೀವ ನದಿ ಕಾವೇರಿ ಮತ್ತು ಪರಿಹಾರೋಪಾಯಗಳು,
ಮಾರ್ಗದರ್ಶಿ ಶಿಕ್ಷಕಿ: ಎಂ.ಟಿ.ಶೋಭಾ: 2024 ರ ಏಪ್ರಿಲ್ ನಲ್ಲಿ ನಡೆಯಲಿರುವ 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೊಡಗಿನ ಈ ಇಬ್ಬರು ಬಾಲ ವಿಜ್ಞಾನಿಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.ರಾಜ್ಯದಿಂದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿರುವ 30 ಕಿರಿಯ ವಿಜ್ಞಾನಿಗಳ ಪೈಕಿ ಕೊಡಗಿನ ಈ ಇಬ್ಬರು ಬಾಲ ವಿಜ್ಞಾನಿಗಳು ಆಯ್ಕೆಯಾಗಿರುವುದು ಕೊಡಗು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ವಿಜ್ಞಾನ ಸಮಾವೇಶದ ಸಂಘಟಕರೂ ಆದ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಬಾಲ ವಿಜ್ಞಾನಿಗಳಿಗೆ ರಾಜ್ಯಸಭಾ ಮಾಜಿ ಸದಸ್ಯರೂ ಆದ ಶಿಕ್ಷಣ ತಜ್ಞ ಬಸವರಾಜ್ ಪಾಟೀಲ್ ಸೇಡಂ ಪ್ರಶಸ್ತಿ ಪತ್ರ ವಿತರಿಸಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ಸಮಾವೇಶದ ಸಂಯೋಜಕರಾದ ಡಾ ಕುಂಟೆಪ್ಪ ಗೌರೀಪುರ್, ಎಚ್.ಜಿ.ಹುದ್ದಾರ್ ಇದ್ದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸುವ ಮೂಲಕ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಸೂಕ್ತ ವೇದಿಕೆ ಒದಗಿಸುತ್ತದೆ ಎಂದು ತಿಳಿಸಿದ್ದಾರೆ. ಕೊಡಗರಹಳ್ಳಿ ಪ್ರೌಢಶಾಲೆಯ ಬಾಲ ವಿಜ್ಞಾನಿ ಎ.ಎಸ್.ಶ್ರೀಶಾ, ಸುಂಟಿಕೊಪ್ಪದಲ್ಲಿ ಟೈಲರ್ ಎ.ಕೆ.ಶ್ರೀಜು ಹಾಗೂ ಹರದೂರು ಗ್ರಾಮದ ಗ್ರಂಥಾಲಯದ ಗ್ರಂಥಪಾಲಕಿ ಕೆ.ಎಸ್.ಸಂಧ್ಯಾ ದಂಪತಿಯ ಪುತ್ರಿಯಾಗಿದ್ದರೆ, ಬಾಲ ವಿಜ್ಞಾನಿ ತಂಡದ ಸದಸ್ಯೆ ಸೃಜನ್ಯ, ಸುಂಟಿಕೊಪ್ಪ ಗದ್ದೆಹಳ್ಳದ ಸುನೀತಾ ಮತ್ತು ಟಿ.ವಿ.ಶಿವರಾಮ್ ಪುತ್ರಿ.
ಹಾಗೆಯೇ, ಮಡಿಕೇರಿ ಕೊಡಗು ವಿದ್ಯಾಲಯದ ಬಾಲ ವಿಜ್ಞಾನಿ ಶ್ರೀಯಾ ಕಿರಣ್, ಮಡಿಕೇರಿ ಕೊಡಗು ವಿದ್ಯಾಲಯದ ಶಿಕ್ಷಕಿ ಕೆ.ಎಸ್.ನಳಿನಿ ಹಾಗೂ ಮದೆನಾಡು ಮೋಂಟಡ್ಕ ಕೆ.ಕಿರಣ್ ಕುಮಾರ್ ದಂಪತಿಯ ಪುತ್ರಿಯಾಗಿದ್ದಾರೆ.
ಬಾಲ ವಿಜ್ಞಾನಿ ತಂಡದ ಸದಸ್ಯ ಶ್ಲೋಕ್ ಅಯ್ಯಪ್ಪ, ತಾಯಿ ಶಿಕ್ಷಕಿ ಕೆ.ಎಂ.ದೃಶ್ಯ ಮತ್ತು ತಂದೆ ಟಾಟಾ ಕಾಫಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಸಿ.ಎ.ರೋಶನ್ ದಂಪತಿಯ ಪುತ್ರ ಎಂದು ತಿಳಿಸಲಾಗಿದೆ. ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ತೊರೆನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜಿ.ಶ್ರೀಹರ್ಷ, ತಾಲ್ಲೂಕಿನ ಕಿರಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಎಂ.ಎ.ಶ್ರೀಜಾ , ಎಂ.ಕೆ.ವೀಣಾ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಗೊಂಡ ಮಕ್ಕಳು, ಮಾರ್ಗದರ್ಶಿ ಶಿಕ್ಷಕರು ಹಾಗೂ ಶಾಲೆಯ ಪ್ರಾಂಶುಪಾಲರು/ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದಕ್ಕೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.