ಮೈಸೂರು: ಕೇಂದ್ರದಲ್ಲಿ ಈ ಸಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ೮ ಸಾವಿರದಂತೆ ವರ್ಷಕ್ಕೆ ೧ ಲಕ್ಷ ನೀಡುತ್ತೇವೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಕೆ.ಆರ್. ಮಿಲ್ ಕಾಲೋನಿ, ನಾಗನಹಳ್ಳಿಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಕೇಂದ್ರದ ಬಿಜೆಪಿ ಸರ್ಕಾರ ಇ.ಡಿ. ಮತ್ತು ಐ.ಟಿ. ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿವೆ. ಸುಳ್ಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಪಕ್ಷ ಜನರಿಗೆ ಹುಸಿ ಭರವಸೆಗಳನ್ನು ನೀಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ. ರಾಜ್ಯದ ೨೨೦ ತಾಲ್ಲೂಕುಗಳಲ್ಲಿ ಬರಗಾಲವಿದೆ. ಕೇಂದ್ರಕ್ಕೆ ೩ ಬಾರಿ ಮನವಿ ಕೊಟ್ಟರೂ ಸಹ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ರಾಜ್ಯದ ೨೬ ಜನ ಲೋಕಸಭಾ ಸದಸ್ಯರು ರಾಜ್ಯದ ಸಮಸ್ಯೆಯ ಬಗ್ಗೆ ಮಾತಾಡದೇ ಮೋದಿಯವರ ಭಟ್ಟಂಗಿಗಳಂತೆ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಪರವಾಗಿ ಕೆಲಸ ಮಾಡುವ ಎಂ. ಲಕ್ಷ್ಮಣ್ರವರಿಗೆ ನಿಮ್ಮ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾತನಾಡಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡುತ್ತೇನೆ. ೨೪ ಗಂಟೆ ನಾನು ಜನರ ಮಧ್ಯೆ ಇರುವವನು ಮಹಾರಾಜರನ್ನು ನೋಡಲು ೧೦೦ ರೂ. ಕೊಟ್ಟು ಟಿಕೆಟ್ ತಗೊಂಡು ಹೋಗಬೇಕು. ಕಾಂಗ್ರೆಸ್ ಪಕ್ಷ ನಿಮಗೆ ಎಲ್ಲವನ್ನು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಋಣ ತೀರಿಸಲು ಹಸ್ತದ ಗುರುತಿಗೆ ಮತನೀಡಿ ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಶಾಸಕ ಮರಿತಿಬ್ಬೇಗೌಡ, ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಅರುಣ್ಕುಮಾರ್, ಬೀರಿಹುಂಡಿ ಬಸವಣ್ಣ, ಲೇಖಾ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಜೆ. ಸತೀಶ್ಕುಮಾರ್, ಮುಖಂಡರುಗಳಾದ ಉಮಾಶಂಕರ್, ಮಾರ್ಬಳ್ಳಿ ಕುಮಾರ್, ಸಿ.ಎಂ. ಸಿದ್ದರಾಮೇಗೌಡ, ಪೈಲ್ವಾನ್ ಶಿವು, ನಾಗರಾಜು, ದಡದಹಳ್ಳಿ ಮಹದೇವು, ಶ್ರೀನಿವಾಸಮೂರ್ತಿ, ರಾಜು,ಚೆನ್ನಾರೆಡ್ಡಿ, ರಾಜಣ್ಣ, ರವಿ, ಮಹಾದೇವ ಹಾಜರಿದ್ದರು.