ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ರೋಡ್ ಶೋಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ ಅವರು ಇಂದು ಚಾಲನೆ ನೀಡಿದರು.
ಮೈಸೂರಿನಲ್ಲಿ ಸ್ವಚ್ಛತೆ, ಮಾದಕ ವಸ್ತುಗಳ ದುಷ್ಪರಿಣಾಮ, ಆರೋಗ್ಯದ ಬಗ್ಗೆ ಕಾಳಜಿ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸಿ ಕೈಜೋಡಿಸಬೇಕೆಂದರು.
ಮೈಸೂರು ನಗರ ವಿಶ್ವವಿಖ್ಯಾತವಾಗಲು ಕಾರಣಕರ್ತರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅವರು ನೀಡಿರುವ ಮೈಸೂರು ನಗರವನ್ನು ಸ್ವಚ್ಛವಾಗಿ ಕಪಾಡಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂದರು.
ಸ್ವಚ್ಚತೆ ಕಪಾಡುತ್ತಿರುವ ಸ್ವಚ್ಛತಾ ಸಿಪಾಯಿಗಳು ಪೌರಕಾರ್ಮಿಕರನ್ನು ಅಭಿನಂದಿಸುತ್ತೇನೆ. ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹುಗುಳುವುದು, ಕಸ ಹಾಕುವುದು, ಸಾಕು ಪ್ರಾಣಿಗಳಿಂದ ಮಲ ಮೂತ್ರ ವಿಸರ್ಜನೆ ಮಾಡಿಸುವ ಪ್ರವೃತ್ತಿಯನ್ನು ತೊರೆಯಬೇಕು.ಶಿಸ್ತು ರೂಡಿಸಿಕೊಂಡರೆ ಮೈಸೂರು ನಗರ ಕೂಡ ಸುಂದರವಾಗುತ್ತದೆ ಎಂದರು.
ಮಹಿಳೆಯರಿಗೆ ಶಿಕ್ಷಣ, ಸಮಾನತೆ ಆರ್ಥಿಕ ಸ್ವಾವಲಂಬನೆ, ರಾಜಕೀಯ ಅಧಿಕಾರ ಲಭ್ಯವಾಗಲಿ ಎಂಬ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾಚ್೯ 8 ರಂದು ಮಹಿಳಾ ದಿನಾಚರಣೆ ಆಚರಿಸಲಾಗಿತ್ತಿದೆ ಎಂದರು.
ಡಾ: ಬಿ.ಆರ್ .ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಅವಕಾಶ, ವೇತನ ನೀಡಬೇಕು ಎಂದು ಕಾಯ್ದೆ ರೂಪಿಸಿದರು. ಕುಟುಂಬವನ್ನು ರೂಪಿಸಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಮಹಿಳೆಯರ ಪತ್ರ ಪ್ರಮುಖವಾಗಿದೆ ಎಂದರು.
ರೋಡ್ ಶೋ ನಲ್ಲಿ ವಿಂಟೇಜ್ ಕಾರ್ , ಬೈಕ್ ಸವಾರರು, ಕಲಾ ತಂಡ, ಪೌರಕಾರ್ಮಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಭಾಗವಹಿಸಿ ಸ್ವಚ್ವತೆಯ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ ಹರೀಶ್ ಗೌಡ, ವಿಧಾನ ಪರಿಷತ್ ಶಾಸಕರಾದ ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.



