ಬೆಂಗಳೂರು : ದೇವೇಗೌಡ ಅವರು ಹಣಕಾಸು ಇಲಾಖೆಯನ್ನು ಬಲವಂತ ಮಾಡಿ ನನಗೆ ವಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, 100 ಕುರಿಗಳನ್ನು ಲೆಕ್ಕ ಹಾಕಲು ಬಾರದ ಸಿದ್ದರಾಮಯ್ಯ ಅವರು, ರಾಜ್ಯ ಬಜೆಟ್ ಅಲ್ಲಿ ಹೇಗೆ ಮಂಡಿಸುತ್ತಾರೆ ಎಂದು ಆರಂಭದ ದಿನಗಳಲ್ಲಿ ಟೀಕೆ ಮಾಡಿದ್ದನ್ನು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದು, ದೇವೇಗೌಡ ಅವರು ಅವಕಾಶ ಕೊಟ್ಟಿದ್ದರಿಂದಾಗಿ ಇಂದು ಸಿದ್ದರಾಮಯ್ಯ 17 ಬಜೆಟ್ಗಳನ್ನು ಮಂಡಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಈ ವೇಳೆ ತಪ್ಪು ಮಾಹಿತಿ ಹೋಗಬಾರದು ಎಂದು ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಸಂಪುಟದಲ್ಲಿ ಖಾತೆಗಳ ಹಂಚಿಕೆ ಕುರಿತು ಆರ್.ಎಲ್.ಜಾಲಪ್ಪ ಅವರ ಮೆಡಿಕಲ್ ಕಾಲೇಜಿನಲ್ಲಿ ಚರ್ಚೆಯಾಗುತ್ತಿತ್ತು. ದೇವೇಗೌಡರು, ಎಂ.ಪಿ. ಪ್ರಕಾಶ್, ಪಿ.ಜಿ.ಆರ್.ಸಿಂಧ್ಯಾ, ಆರ್.ಎಲ್. ಜಾಲಪ್ಪ ಮತ್ತು ನಾನು ಹಾಜರಿದ್ದೆವು. ನಾನು ಕಂದಾಯ ಇಲಾಖೆಯನ್ನು ಕೇಳಿದ್ದೆ. ಆರ್.ಎಲ್.ಜಾಲಪ್ಪ ಆ ಖಾತೆ ನನಗೆ ಬೇಕು ಎಂದು ಪಟ್ಟು ಹಿಡಿದರು. ಆಗ ದೇವೇಗೌಡರು ನನಗೆ ಹಣಕಾಸು ಖಾತೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ನಾನು ಆರ್ಥಿಕ ತಜ್ಞನಲ್ಲ, ಅರ್ಥಶಾಸ್ತ್ರವನ್ನು ಓದಿಲ್ಲ, ಹಣಕಾಸು ಖಾತೆ ಬೇಡ ಎಂದು ಹೇಳಿದ್ದೆ. ಅದಕ್ಕೆ ಒಪ್ಪದ ದೇವೇಗೌಡರು ನನಗೆ ನಂಬಿಕಸ್ತರೇ ಬೇಕು. ನೀನೇ ಹಣಕಾಸು ಖಾತೆಯನ್ನು ನೋಡಿಕೋ ಎಂದು ಬಲವಂತ ಮಾಡಿಕೊಟ್ಟರು ಎಂದು ವಿವರಿಸಿದರು.
ಇನ್ನೂ ದೇವೇಗೌಡರು ಅವಕಾಶ ಕೊಟ್ಟಿದ್ದರಿಂದಾಗಿ ಇಂದು ನೀವು ಹೆಚ್ಚು ಬಜೆಟ್ ಮಂಡಿಸಿ ದಾಖಲೆ ಮಾಡಲು ಸಾಧ್ಯವಾಗಿದೆ. ದೇವೇಗೌಡರಿಗೆ ಆಗಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು ಅನಿಸುತ್ತಿದೆ. ಇದಕ್ಕಾಗಿ ನೀವು ದೇವೇಗೌಡರಿಗೆ ಧನ್ಯವಾದ ಹೇಳಬೇಕು ಎಂದು ಆರ್.ಅಶೋಕ್ ಹೇಳಿದರು.



