ಶಿರಾ : ಶಿಕ್ಷಣ ಪಡೆದವರೇ ಹೆಚ್ಚು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಜನರನ್ನು ವೈಚಾರಿಕತೆಯತ್ತ ಕರೆ ತಂದು ಮೂಢನಂಬಿಕೆಗಳಿಂದ ರಕ್ಷಣೆ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಅಹಿಂದ ವಿದ್ಯಾರ್ಥಿ ನಾಯಕತ್ವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಅಸಮಾನತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿಯಂತ ಅನೇಕ ಪಿಡುಗುಗಳು ಭಾರತದಲ್ಲಿ ನಿರ್ಮೂಲನೆಯಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಸಮಾನತೆ ಅಥವಾ ಮೌಢ್ಯ ವಿರೋಧಿ ವಿಚಾರಗಳನ್ನು ಮಾತನಾಡಿದರೆ ದೇಶ ವಿರೋಧಿ, ಧರ್ಮ ವಿರೊಧಿಯಾಗಿ ಬಿಂಬಿಸಲಾಗುತ್ತಿದೆ. ಇವೆಲ್ಲವನ್ನು ಮೀರಿ ಬೆಳೆದರೆ ಮಹಾನ್ ನಾಯಕರಾಗುತ್ತೇವೆ ಎಂದರು.
ಇನ್ನೂ ಎಲ್ಲ ಪಕ್ಷಗಳಲ್ಲೂ ಮನುವಾದಿಗಳಿದ್ದಾರೆ. ನಮ್ಮ ಅಹಿಂದ ಪಕ್ಷಗಳಲ್ಲೂ ಇದ್ದಾರೆ. ನಮ್ಮದೇ ಸರ್ಕಾರ ಇದ್ದರೂ ಕೂಡ ನಮ್ಮನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಅಂತಹ ಸುಧಾರಕರು ಬಂದು ಹೋದರೂ ನಾವು ಬದಲಾಗಿಲ್ಲ. ದಾರಿ ತಪ್ಪುತ್ತಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ವಕೀಲ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಯಾವುದೇ ರಾಜಕಾರಣಿ ಮೂಢನಂಬಿಕೆಗಳ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಢನಂಬಿಕೆ ವಿರುದ್ಧ ಕಾನೂನು ತಂದರು. ದೇಶದಲ್ಲಿ ಮೂಡನಂಬಿಕೆ ವಿರುದ್ಧ ಕೆಲಸ ಮಾಡುತ್ತಿರುವ ಏಕೈಕ ರಾಜಕಾರಣಿ ಎಂದರೆ ಸತೀಶ್ ಜಾರಕಿಹೊಳಿ ಎಂದರು.
ಕಾರ್ಯಕ್ರಮದಲ್ಲಿ ಪ್ರೇಮ.ಜಿ.ಕೆ., ಅನಂತನಾಯ್ಕ.ಎನ್., ಮಂಜುನಾಥ, ರವೀಂದ್ರ ನಾಯ್ಕರ್, ದೇವರಾಜ್ ಪಾಟೀಲ್ ಹಾಜರಿದ್ದರು.



