ಬೆಂಗಳೂರು : ಬೆಂಗಳೂರಿನ ಆರೋಗ್ಯಸೌಧದ ಆವರಣದಲ್ಲಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಆಶಾ ಕಾರ್ಯಕರ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಚಿತವಾಗಿ ಎಲೆಕ್ಟ್ರಿಕ್ ಬೈಕ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಹೊರ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಒಂದು ಹೊಸ ಸಾಧನ ಸೇರ್ಪಡೆಯಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ “ಯುನೈಟೆಡ್ ವೇ ಆಫ್ ಬೆಂಗಳೂರು” ಸಂಸ್ಥೆ ಮತ್ತು “ಹೆಲ್ತಿಯಮ್ ಮೆಡ್ಟೆಕ್ ಸಂಸ್ಥೆ”ಯ ಸಹಯೋಗದೊಂದಿಗೆ ಸಿ.ಎಸ್.ಆರ್ ಯೋಜನೆಯಡಿ ಇ-ಬೈಕ್ಗಳನ್ನು ನೀಡುತ್ತಿರುವುದು ಸಂತಸದ ವಿಷಯ ಎಂದರು.
ಇನ್ನೂ ಪ್ರಸ್ತುತ ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), GBA ಹಾಗೂ ಬೆಂಗಳೂರು ನಗರ ಜಿಲ್ಲೆಯ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೊದಲ ಹಂತದಲ್ಲಿ ಒಟ್ಟು 69 ಇ-ಬೈಕ್ (Electric Bike) ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂಸ್ಥೆಯವರು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇನ್ನುಳಿದ ಜಿಲ್ಲೆಗಳಿಗೆ ಇ-ಬೈಕ್ ಗಳನ್ನು ನೀಡಲು ಸಹಕರಿಸುವುದಾಗಿ ತಿಳಿಸಿದರಲ್ಲದೆ, ಈ ದ್ವಿಚಕ್ರ ವಾಹನಗಳು ನಮ್ಮ ಆರೋಗ್ಯ ಸೇವೆಯನ್ನು ಜನರ ಮನೆಬಾಗಿಲಿಗೆ ತಲುಪಿಸಲು ಸಹಾಯ ಮಾಡಲಿವೆ. ಆರೋಗ್ಯ ಸೇವೆ ಎನ್ನುವುದು ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ, ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಬೇಕು ಎನ್ನುವ ನಮ್ಮ ಆಶಯಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಗಲಿರುಳು ಎನ್ನದೆ ಜನರಿಗೆ ಆರೋಗ್ಯ ಸೇವೆ ನೀಡಲು ಶ್ರಮಿಸುತ್ತಿದ್ದಾರೆ. ದೂರದ ಊರುಗಳಿಗೆ, ಕುಗ್ರಾಮಗಳಿಗೆ ಹೋಗಲು ಅವರಿಗೆ ಸಾರಿಗೆಯ ಸಮಸ್ಯೆ ಆಗುತ್ತಿತ್ತು. ಈಗ ನೀಡಲಾಗುತ್ತಿರುವ ಈ ಇ-ಬೈಕ್ಗಳಿಂದ ಅವರು ಸಕಾಲಕ್ಕೆ ಜನರ ಬಳಿಗೆ ಹೋಗಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲು ಇದು ಸಹಕಾರಿ. ಬೈಕ್ ನೊಂದಿಗೆ, ಹೆಲ್ಮೆಟ್, ನೀರಿನ ಬಾಟಲ್, ರೈನ್ಕೋಟ್ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.



