ಬೆಂಗಳೂರು : ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಆರ್ಸಿಬಿ ತಂಡದ ಜೊತೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ. ರನ್ ಮಿಷಿನ್ ವಿರಾಟ್ ಕೊಹ್ಲಿ ಸೇರಿ ಮೂರು ಆಟಗಾರರ ಭಾವಚಿತ್ರ ಬಳಸಲು 1 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಬರೋಬ್ಬರಿ 4.80 ಕೋಟಿ ರೂ. ಕೆಎಂಎಫ್ ವೆಚ್ಚ ಮಾಡಿದೆ. ಆರ್ಸಿಬಿಗೆ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಅಧಿಕೃತ ಡೈರಿ ಪಾರ್ಟ್ನರ್ ಆಗಿದೆ. ಅತಿ ಹೆಚ್ಚಿನ ಫ್ಯಾನ್ಸ್ ಗಳನ್ನ ಹೊಂದಿರುವ ಆರ್ಸಿಬಿ ತಂಡಕ್ಕೆ ಹೆಮ್ಮೆಯ ನಂದಿನಿ ಪಾರ್ಟ್ನರ್ ಆಗಿರುವ ಬಗ್ಗೆ ಕೆಎಂಎಫ್ ಎಂ.ಡಿ ಶಿವಸ್ವಾಮಿ ಖುಷಿ ವ್ಯಕ್ತಪಡಿಸಿದ್ರು.
ನಂದಿನಿ ಉತ್ಪನ್ನವನ್ನ ದೇಶ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದೇವೆ. ಆರ್ಸಿಬಿ ಜೊತೆಗೆ ನಮ್ಮ ಮಾರ್ಕೆಟ್ ವಿಸ್ತರಣೆಯಾಗಲಿದೆ. ಕಳೆದ 2024 ರಿಂದ ಆರ್ಸಿಬಿ ಜೊತೆಗೆ ಈ ಪ್ರಯತ್ನ ನಡೆಸಲಾಗಿತ್ತು. ಕ್ರೀಡೆಗಳಲ್ಲಿ ನಂದಿನಿ ಪ್ರಾಯೋಜಕತ್ವದಿಂದ ಯುವಜನರನ್ನ ಸೆಳೆಯುವ ಉದ್ದೇಶದಿಂದ ಈ ಪ್ರಾಯೋಜಕತ್ವ ಸಹಾಯವಾಗಲಿದೆ. ಸದ್ಯ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ದೇವದತ್ ಪಡಿಕಲ್ ಭಾವಚಿತ್ರವನ್ನ ಪ್ರಾಡಕ್ಟ್ ಪ್ಯಾಕ್ ಮೇಲೆ ಅನಾವರಣ ಮಾಡಲಾಗಿದೆ.

ಒಟ್ಟು 4 ಕೋಟಿ 80 ಲಕ್ಷ ರೂ. ಟೆಂಡರ್ ಪಾಯೋಜಕತ್ವ ಇದಾಗಿದೆ. ಆರ್ಸಿಬಿ ಮೊದಲ ಪಂದ್ಯ ಇದೇ 28 ರಿಂದ ಶುರುವಾಗಲಿದೆ. ಹೀಗಾಗಿ ಮಾ. 28 ರಿಂದ 1 ವರ್ಷದವರೆಗೆ ಈ ಒಪ್ಪಂದ ಇರಲಿದೆ ಎಂದು ಎಂಡಿ ಶಿವಸ್ವಾಮಿ ತಿಳಿಸಿದರು. ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ ನಿಂದಾಗಿ ನಂದಿನಿ ಬ್ರಾಂಡ್ ಮೇಲೆಯೂ ಪರಿಣಾಮ ಬೀರಿದೆ. ನಂದಿನಿ ಹಾಲು ಹಾಗೂ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಲ್ಲಿ 5-6 ಸಾವಿರ ಲೀಟರ್ ಮಾರಾಟ ಕಡಿಮೆ ಆಗಿದೆ ಎಂದು ಕೆಎಂಎಫ್ ಎಂಡಿ ತಿಳಿಸಿದ್ರು.
ಯುಗಾದಿ ಹಾಗೂ ರಂಜಾನ್ ಹಿನ್ನೆಲೆ 51 ಲಕ್ಷ 26 ಸಾವಿರ ಲೀಟರ್ ಮಾರಾಟವಾಗಿದೆಯಂತೆ. ಪ್ರತಿ ದಿನ 46 ಲಕ್ಷ ಲೀಟರ್ ಹಾಲು ಮಾರಾಟವಾಗ್ತಿತ್ತು. ಇದರ ಜೊತೆಗೆ ದುಬೈ, ಸೌದಿಗೆ ನಂದಿನಿ ಹಾಲು ಪೂರೈಕೆ ಮಾಡ್ತಿದ್ದೇವೆ. ಕಳೆದ ತಿಂಗಳು ಕಳುಹಿಸಿದ್ದ ತುಪ್ಪ ಕಳೆದ ವಾರ ರೀಚ್ ಆಗಿದೆ. ಬೇಡಿಕೆ ಇದ್ರೇ ಪೂರೈಕೆ ಮಾಡ್ತೀವಿ ಅಂದ್ರು ಕೆಎಂಎಫ್ ಎಂಡಿ. ಈಗ ಯುದ್ದದ ಹಿನ್ನೆಲೆ ಮತ್ತೆ ಯಾವಾಗ್ ಹೋಗುತ್ತೋ ಗೊತ್ತಿಲ್ಲ ಎಂದರು.



