ಬೆಂಗಳೂರು: ಮರ್ಮಾಂಗದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದ ಕಾರಣ ವ್ಯಕ್ತಿ ರೋಡ್ ನಲ್ಲೆ ನರಳಿ ನರಳಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಾ ನವಾಜ್ (45) ಎಂಬವರು ಮರ್ಮಾಂಗದಲ್ಲಿ ಗಡ್ಡೆ ಬೆಳೆದಿದ್ದರಿಂದ, ಚಿಕಿತ್ಸೆಗಾಗಿ ನಗರದ ಪ್ರತಿಷ್ಟಿತ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಮರ್ಮಾಂಗವನ್ನು ಕೊಯ್ದು ಗಡ್ಡೆ ತೆಗೆದಿದ್ದಾರೆ. ಆದರೆ, ಆಪರೇಷನ್ ಮುಗಿದ ಬಳಿಕ ಗಾಯಕ್ಕೆ ಹೊಲಿಗೆ ಹಾಕದೆ, ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಹೇಳಿ ಸುಮ್ಮನಾಗಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಗಾಯ ಆರಿಲ್ಲ ಎಂದು ನಿರ್ಲಕ್ಷ್ಯ ತೋರಿದರೆ, ಅತ್ತ ವಾರ್ಡ್ ಸಿಬ್ಬಂದಿ ಡಿಸ್ಟಾರ್ಜ್ ಆಗುವಂತೆ ಒತ್ತಡ ಹೇರಿದ್ದಾರೆ. ಕೊನೆಗೆ ಸ್ಟಿಚ್ ಕೂಡ ಹಾಕದೆ ರೋಗಿಯನ್ನು ಹೊರಕ್ಕೆ ಕಳುಹಿಸಲಾಗಿದೆ.
ಗತಿ ಇಲ್ಲದ ನವಾಜ್ ಅವರ ಪತ್ನಿ, ರಕ್ತ ಸುರಿಯುತ್ತಿದ್ದರಿಂದ ಪತಿಯನ್ನು ಆಸ್ಪತ್ರೆಯ ಎದುರಿನ ಫುಟ್ಪಾತ್ನಲ್ಲೇ 3 ದಿನ ಇಟ್ಟುಕೊಂಡು ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ. ಆದರೂ ಕಲ್ಲುಹೃದಯದ ಸಿಬ್ಬಂದಿಗಳು ಮಾತ್ರ ಕರಗದೇ ರೋಗಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ.
ಮರ್ಮಾಂಗದ ವಿಪರೀತ ನೋವು ಮತ್ತು ರಕ್ತಸ್ರಾವ ತಾಳಲಾರದೆ ನವಾಜ್ 10 ದಿನಗಳ ಹಿಂದೆ ನರಳಿ ನರಳಿ ಫುಟ್ಪಾತ್ನಲ್ಲೇ ಪ್ರಾಣಬಿಟ್ಟಿದ್ದಾರೆ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ನವಾಜ್ ಸಾವಿನಿಂದ ಆತನ ಪತ್ನಿ ಮತ್ತು 4 ಪುಟ್ಟ ಮಕ್ಕಳು (4 ತಿಂಗಳ ಮಗುವಿನಿಂದ 6 ವರ್ಷದವರೆಗೆ) ಇಂದು ಬೀದಿಗೆ ಬಿದ್ದಿದ್ದಾರೆ.
ಪ್ರಕರಣ ಮಾದ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಿದೆ. ಸಮಿತಿಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಅಧೀಕ್ಷಕ ತಿಳಿಸಿದ್ದಾರೆ.



