ಕೆ.ಆರ್.ನಗರ : ತಾಲೂಕಿನ ಮಾದಹಳ್ಳಿ ಗ್ರಾಮ ಪರಿಮಿತಯ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು ವರ್ಷಾಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಗ್ರಾಮದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮೊದಲನೇ ಹಂತದಲ್ಲಿ 40 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದ್ದು ಅಗತ್ಯವಿದ್ದಲ್ಲಿ ಮತ್ತಷ್ಟು ಹಣ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಅವರು ಈ ಸಂಬಂಧ ಸಂಬಂಧಿತ ಅಧಿಕಾರಿಗಳು ಮತ್ತು ಅಭಿಯಂತರರು ಸಮಗ್ರ ವರದಿ ನೀಡಬೇಕು ಎಂದು ಸೂಚಿಸಿದರು.
ಗ್ರಾಮದ ಕೆಲವು ರಸ್ತೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಗಳು ಸಮರ್ಪಕವಾಗಿ ಅಳವಡಿಕೆಯಾಗಿಲ್ಲವೆಂಬ ದೂರುಗಳು ಕೇಳಿ ಬಂದಿದ್ದು ಕೂಡಲೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಆನಂದ್ ಅವರಿಗೆ ತಿಳಿಸಿ ಸ್ಥಳ ಪರಿಶೀಲನೆ ನಡೆಸುವಂತೆ ಆದೇಶ ನೀಡಿ ಸಮಸ್ಯೆ ಪರಿಹರಿಸುತ್ತೇನೆ ಎಂದರು.
ಗ್ರಾಮದಲ್ಲಿ ಒತ್ತುವರಿಯಾಗಿರುವ ಜಾಗವನ್ನು ಯಜಮಾನರು ಮತ್ತು ಪ್ರಮುಖರು ಸೇರಿಕೊಂಡು ತೆರವು ಮಾಡಿಸಿದರೆ ಅಭಿವೃದ್ಧಿ ಕೆಲಸಗಳಿಗೆ ಅಗತ್ಯವಿರುವ ಹಣವನ್ನು ಒದಗಿಸಲು ಬದ್ದನಿದ್ದೇನೆ ಎಂದು ಭರವಸೆ ನೀಡಿದರು.
ಕೆ.ಆರ್.ನಗರ ರಾಮನಾಥಪುರ ರಸ್ತೆಯ ಕೆಸ್ತೂರು ಗೇಟ್ ನಿಂದ ಕೆಸ್ತೂರು, ಕೆಸ್ತೂರು ಕೊಪ್ಪಲು, ಮಳಲಿ, ಮಾವತ್ತೂರು, ಮಾರಗೌಡನಹಳ್ಳಿ, ಮಾದಹಳ್ಳಿ ಶಿರೇನಳ್ಳಿ, ಸಂಪರ್ಕ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಸರ್ಕಾರದಿಂದ 15 ಕೋಟಿ ಹಣ ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಪ್ರಕಟಿಸಿದರು.
ಆನಂತರ ಶಾಸಕರು ಅಡಗನಹಳ್ಳಿ ಗ್ರಾಮಕ್ಕೆ ತೆರಳಿ 50 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಮಾದಳ್ಳಿ ಗ್ರಾಮದ ಯಜಮಾನರಾದ ರಾಮೇಗೌಡ, ದೇವರಾಜು, ಮುಖಂಡರಾದ ಮಲ್ಲೇಶ್, ಹೇಮಂತ್ , ಚಿಕ್ಕೇಗೌಡ, ವಿಜಿ, ವಕ್ತಾರ ಸೈಯದ್ ಜಾಬೀರ್, ಗುತ್ತಿಗೆದಾರ ಕೆಸ್ತೂರುಕೊಪ್ಪಲುಜಗದೀಶ್, ಇಂಜಿನಿಯರ್ ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.



