ಹಾಸನ : ವಿವಾಹವಾಗಲು ಹುಡುಗಿ ಸಿಗದಿದ್ದಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಕೃಷ್ಣ ಸಮುದ್ರದ ಕಲ್ಯಾಣಿ ಬಳಿ ಘಟನೆ ನಡೆದಿದೆ.
ಮೃತರನ್ನು ವಿನಯ್ (35) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿದ್ದ ವಿನಯ್, ಕಳೆದ ಕೆಲವು ಸಮಯದಿಂದ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದರು. ಆದರೆ ಹಲವು ಕಡೆ ಪ್ರಯತ್ನಿಸಿದರೂ ಯಾವುದೇ ಸಂಬಂಧ ಕುದುರಿರಲಿಲ್ಲ. ನನ್ನ ವಯಸ್ಸಿನವರಿಗೆಲ್ಲ ಮದುವೆಯಾಗಿದೆ, ನನಗೆ ಮಾತ್ರ ಹುಡುಗಿ ಸಿಗುತ್ತಿಲ್ಲ ಎಂದು ವಿನಯ್ ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದ. ಹೀಗಾಗಿ ಬೇಲೂರಿನ ಕೃಷ್ಣ ಸಮುದ್ರದ ಕಲ್ಯಾಣಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



