ಚಾಮರಾಜನಗರ : ಚಿಪ್ಪುಹಂದಿಯನ್ನು ಬೇಟೆಯಾಡಿ ಅದರ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕಸಬಾ ಹೋಬಳಿಯಲ್ಲಿ ನಡೆದಿದೆ.
ಮೇಟಿಕುಪ್ಪೆ ಗ್ರಾಮದ ಹರೀಶ್ ಬಂಧಿತ ಆರೋಪಿಯಾಗಿದ್ದು, ಮೂರ್ಕಲ್ ಮುಖ್ಯರಸ್ತೆಯ ಅಗಸನಹುಂಡಿ ಬಸ್ ನಿಲ್ದಾಣದ ಬಳಿ ಈತ ಚಿಪ್ಪುಹಂದಿಯನ್ನು ಬೇಟೆಯಾಡಿ ಅದರ ಚಿಪ್ಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಗುಪ್ತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಶೇಷ ಹುಲಿ ಸಂರಕ್ಷಣಾ ದಳದ ಎಸಿಎಫ್ ಮಂಜುನಾಥ ಹಾಗೂ ಪ್ಲಟೂನ್-2ರ ಆರ್ಎಫ್ಒ ರಾಮಾಂಜನೇಯಲು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆರೋಪಿಯಿಂದ 102 ಚಿಪ್ಪುಗಳು (ಸುಮಾರು 320 ಗ್ರಾಂ) ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಈ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವಿನೋದ್, ಸಂತೋಷ್, ಕಲೀಮ್ ಪಾಷ ಮತ್ತು ಗಸ್ತು ವನಪಾಲಕರಾದ ಮಲ್ಲಿಕಾರ್ಜುನ, ಸುರೇಶ್, ಬಿಸಿ ಕಾಳ ಸೇರಿದಂತೆ ಇತರೆ ಸಿಬ್ಬಂದಿ ಭಾಗವಹಿಸಿದ್ದರು.
ಬಂಧಿತನ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



