ರಾಮನಗರ: ವಿಶೇಷ ಪೂಜೆಗೆ ನಿನ್ನ ಬೆತ್ತಲೆ ಫೋಟೋ ಕಳಿಸು, ಪೂಜೆ ಮುಗಿದ ಮೇಲೆ ನಿನಗೆ 30 ಲಕ್ಷ ರೂ. ಕೊಡ್ತೀನಿ ಎಂದು ಮಹಿಳೆಯೊಬ್ಬರಿಗೆ ಜ್ಯೋತಿಷಿಯೊಬ್ಬ ಕಿರುಕುಳ ನೀಡಿದ ಆರೋಪವೊಂದು ರಾಮನಗರದ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೇಳಿ ಬಂದಿದೆ.
ಗ್ರಾಮದ ಕಿರಣ್ ಎಂಬಾತ ಮಹಿಳೆಯೊಬ್ಬರಿಗೆ ಮನಿ ಡಬ್ಲಿಂಗ್ ಮಾಡುವ ಪೂಜೆಗೆ ನಿನ್ನನ್ನು ಸೆಲೆಕ್ಟ್ ಮಾಡಬೇಕಾದರೆ ನೀನು ಬೆತ್ತಲೆ ಫೋಟೋ ಕಳಿಸು ಎಂದು ರಾತ್ರಿ ವೇಳೆ ಮೆಸೇಜ್ ಮಾಡುತ್ತಿದ್ದ. ಮೆಸೇಜ್ನಲ್ಲಿ ನಾನು ಬೆಂಗಳೂರಿನಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದೀನಿ, ಇದಕ್ಕೆ ಮೈ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕೂರಬೇಕು. ಆ ಪೂಜೆಗೆ ನಿನ್ನನ್ನ ಸೆಲೆಕ್ಟ್ ಮಾಡಲು ನಿನ್ನ ಬೆತ್ತಲೆ ಫೋಟೊ ಕಳುಹಿಸು. ಪೂಜೆ ಮುಗಿದ ಬಳಿಕ 30 ಲಕ್ಷ ರೂ. ಹಣ ಕೊಡ್ತೀನಿ ಎಂದು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಆರೊಪಿಸಿದ್ದಾಳೆ.
ಕಳೆದ ಒಂದು ವಾರದಿಂದ ಜ್ಯೋತಿಷಿ ಕಿರುಕುಳ ನೀಡುತ್ತಿದ್ದಾನೆ. ಎರಡು ದಿನಗಳ ಹಿಂದೆ ಮಹಿಳಾ ಠಾಣೆಗೆ ದೂರು ನೀಡಿದ್ರೂ ಆರೋಪಿಯನ್ನು ಬಂಧಿಸಿಲ್ಲ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ



