ನವದೆಹಲಿ : ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೀರ ಸೈನಿಕರ ಅದ್ಭುತ ಪರಾಕ್ರಮ ಮತ್ತು ದೇಶಭಕ್ತಿಯನ್ನು ಸ್ಮರಿಸಿದ್ದಾರೆ. ಭಯೋತ್ಪಾದನೆಯನ್ನು ಸೋಲಿಸುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಸಂಪೂರ್ಣ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯುವ ನಮ್ಮ ಸಂಕಲ್ಪಕ್ಕೆ ನಾವು ಇಂದಿಗೂ ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಸೈನಿಕರ ಅಪ್ರತಿಮ ಪರಾಕ್ರಮದಿಂದ ಭಾರತಕ್ಕೆ ಅಸಾಧಾರಣ ಜಯ
ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿಯವರು ಹೀಗೆ “ಒಂದು ವರ್ಷದ ಹಿಂದೆ ‘ಆಪರೇಷನ್ ಸಿಂದೂರ್’ ಸಮಯದಲ್ಲಿ ನಮ್ಮ ಸೇನಾಪಡೆಗಳು ಅಪ್ರತಿಮ ಧೈರ್ಯ, ನಿಖರತೆ ಮತ್ತು ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದವು. ಪಹಲ್ಗಾಮ್ನಲ್ಲಿ ಅಮಾಯಕ ಭಾರತೀಯರ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡಿದವರಿಗೆ ಅವರು ತಕ್ಕ ಪ್ರತ್ಯುತ್ತರ ನೀಡಿದರು. ಇಡೀ ರಾಷ್ಟ್ರವು ನಮ್ಮ ವೀರ ಯೋಧರ ಶೌರ್ಯಕ್ಕೆ ನಮನ ಸಲ್ಲಿಸುತ್ತದೆ.” ಎಂದು ಬರೆದುಕೊಂಡಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವು ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಯುವ ಅಚಲ ಸಂಕಲ್ಪವನ್ನು ‘ಆಪರೇಷನ್ ಸಿಂದೂರ್’ ಜಗತ್ತಿಗೆ ತೋರಿಸಿಕೊಟ್ಟಿದೆ. ಇದು ನಮ್ಮ ಸೇನಾಪಡೆಗಳ ವೃತ್ತಿಪರತೆ, ಸನ್ನದ್ಧತೆ ಮತ್ತು ಸಮನ್ವಯ ಶಕ್ತಿಯನ್ನು ಎತ್ತಿ ತೋರಿಸಿದೆ. ಅಲ್ಲದೆ, ರಕ್ಷಣಾ ಕ್ಷೇತ್ರದಲ್ಲಿ ಭಾರತದ ‘ಆತ್ಮನಿರ್ಭರತೆ’ ಅಭಿಯಾನವು ನಮ್ಮ ಭದ್ರತೆಯನ್ನು ಹೇಗೆ ಬಲಪಡಿಸಿದೆ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಅಚಲ ಸಂಕಲ್ಪ
ತಮ್ಮ ಪೋಸ್ಟ್ನಲ್ಲಿ, “ಇಂದಿಗೆ ಒಂದು ವರ್ಷ ಕಳೆದಿದ್ದರೂ, ಭಯೋತ್ಪಾದನೆಯನ್ನು ಮತ್ತು ಅದಕ್ಕೆ ಸಹಾಯ ಮಾಡುವ ವ್ಯವಸ್ಥೆಯನ್ನು ನಾಶಪಡಿಸುವ ನಮ್ಮ ನಿರ್ಧಾರದಲ್ಲಿ ನಾವು ಮೊದಲಿನಂತೆಯೇ ಅಚಲವಾಗಿದ್ದೇವೆ,” ಎಂದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, “ಆಪರೇಷನ್ ಸಿಂದೂರ್ನಲ್ಲಿ ಭಾರತಕ್ಕೆ ಸಂದ ಅಸಾಧಾರಣ ವಿಜಯವು ನಮ್ಮ ಸೈನಿಕರ ಅದ್ಭುತ ಪರಾಕ್ರಮ ಮತ್ತು ದೇಶಭಕ್ತಿಗೆ ಪ್ರೇರಕ ಉದಾಹರಣೆಯಾಗಿದೆ. ಅವರ ಅದಮ್ಯ ಧೈರ್ಯ ಮತ್ತು ಕರ್ತವ್ಯನಿಷ್ಠೆಯ ಬಗ್ಗೆ ಪ್ರತಿ ದೇಶವಾಸಿಯೂ ಹೆಮ್ಮೆಪಡುತ್ತಾರೆ,” ಎಂದು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿಯವರು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ. “ಉದೀರ್ಣಮನಸೋ ಯೋಧಾ ವಾಹನಾನಿ ಚ ಭಾರತ। ಯಸ್ಯಾಂ ಭವಂತಿ ಸೇನಾಯಾಂ ಧ್ರುವಂ ತಸ್ಯಾಂ ಜಯಂ ವದೇತ್।।”
ಇದರ ಅರ್ಥ “ಯಾವ ಸೇನೆಯಲ್ಲಿ ಯೋಧರು ಉತ್ಸಾಹಿಗಳಾಗಿರುತ್ತಾರೋ, ಯಾರ ಮನೋಬಲ ಉನ್ನತ ಮಟ್ಟದಲ್ಲಿರುತ್ತದೆಯೋ ಮತ್ತು ಯಾರ ಬಳಿ ಯುದ್ಧದ ಉತ್ತಮ ಸಾಧನಗಳಿರುತ್ತವೆಯೋ, ಅಂತಹ ಸೇನೆಗೆ ಜಯ ಖಂಡಿತ.”
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಈ ಅದ್ಭುತ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತ್ತು. 22 ಏಪ್ರಿಲ್ 2025 ರಂದು ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು. ಇದರ ನಂತರ, ಭಾರತೀಯ ಸೇನೆಯು ಮೇ 6 ಮತ್ತು 7 ರಂದು ‘ಆಪರೇಷನ್ ಸಿಂದೂರ್’ ಆರಂಭಿಸಿ, ಗಡಿಯಾಚೆ ಅಡಗಿದ್ದ ಹಲವು ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು.



