ಮೈಸೂರು : ಶಿಕ್ಷಣಲ್ಲಿ ಬದಲಾವಣೆ, ಗುಣಮಟ್ಟದ ಶಿಕ್ಷಣ ತರಲು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಿಸುತ್ತಿದ್ದೇವೆ ಹೊರತು ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಕುವೆಂಪುನಗರದ ನವಿಲು ರಸ್ತೆಯಲ್ಲಿರುವ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ನಿವಾಸಕ್ಕೆ ಶನಿವಾರ ತೆರಳಿ 1 ಗಂಟೆಗೂ ಹೆಚ್ಚು ಸಮಯ ಅವರೊಂದಿಗೆ ಚರ್ಚಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದಿಂದ ಶಾಲೆಗಳನ್ನು ಮುಚ್ವುವುದಿಲ್ಲ, ಕೆಲವರ ತಪ್ಪು ಗ್ರಹಿಕೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಇದಕ್ಕೆ ವಿರೋಧವಿದ್ದರೆ ಅವರ ಜೊತೆಯೂ ಮಾತನಾಡಿ ಅವರಿಗೆ ಇದರ ಉದ್ದೇಶವನ್ನು ತಿಳಿಸುತ್ತೇನೆ ಎಂದು ಹೇಳಿದರು.
ಒಬ್ಬ ಶಿಕ್ಷಣ ಸಚಿವನಾಗಿ ಸಾಹಿತಿ ದೇವನೂರು ಮಹದೇವ ಅವರ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ. ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇವೆ. ಅದರ ಫಲವಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದರು.
ಈಗಾಗಲೇ ದೇವನೂರು ಮಹಾದೇವ ಅವರು ನಾಟಕ, ಕಲೆ, ಸಾಹಿತ್ಯದ ಅರಿವು ಮೂಡಿಸುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಗಳನ್ನು ಸ್ವೀಕರಿಸಿ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದನ್ನು ಕಡ್ಡಾಯ ಮಾಡುವುದು ಸಾಧ್ಯವಿಲ್ಲ. ಯಾವ ಶಾಲೆಗೆ ಸೇರಿಸಬೇಕು ಎಂಬುದು ಪೋಷಕರು ಹಾಗೂ ಮಕ್ಕಳ ಹಕ್ಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟ ಅಭಿಪ್ರಾಯ ನೀಡಿದೆ. ಆದರೆ ಎಲ್ಲರೂ ಕನ್ನಡ ಶಾಲೆಗಳತ್ತ ಮುಖ ಮಾಡಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಇದೇ ವೇಳೆ ಕೇಸರಿ ಶಾಲು ಹಾಕಿಸಿ ಕಳುಹಿಸುವುದಾಗಿ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಬಿಜೆಪಿಯವರು ಹಿಜಾಬ್ ಅಂತ ಕರೀತಾರೆ, ನಾವು ಸಮಾನತೆ ಅಂತೀವಿ. ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ಶಾಲು ಹಾಕಿ ಬರಲಿ, ಬಳಿಕ ನಾನು ಉತ್ತರ ಕೊಡ್ತೀನಿ. ಕೇಂದ್ರೀಯ ವಿದ್ಯಾಲಯ, ಮಹರಾಷ್ಟ್ರದಲ್ಲಿ ಯಾವ ಶಿಕ್ಷಣ ನೀಡಲಾಗುತ್ತಿದೆ ಇದರ ಬಗ್ಗೆ ಏಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಶಿಕ್ಷಣ ಸಚಿವ ನನ್ನ ಬಳಿ ಬಂದು ಕಲಿಯಲಿ: ನೀಟ್ ಪರೀಕ್ಷೆ ಸೋರಿಕೆಯಾದ ಮೇಲೆ ಉತ್ತರಿಸಲಾಗದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾಲ್ಕು ದಿನ ಕಣ್ಮರೆಯಾಗಿದ್ದರು. ಇವರಿಗೆ ಯಾವ ನೈತಿಕತೆ ಇದೆ. ನನ್ನ ರೀತಿ ಕುಳಿತು ಮಾಧ್ಯಮಗಳಿಗೆ ಉತ್ತರ ನೀಡಬೇಕಿತ್ತು. ಇವರಿಗೆ ಶಿಕ್ಷಣ ಇಲಾಖೆ ನಡೆಸಲು ಗೊತ್ತಿಲ್ಲದಿದ್ದರೆ ನನ್ನ ಬಳಿ ಬರಲಿ ನಾನು ಕಲಿಸಿಕೊಡುತ್ತೇನೆ ಎಂದು ಹೇಳಿದರು.
ತಮ್ಮ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸುವವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನನ್ನ ಶೈಕ್ಷಣಿಕ ಹಿನ್ನಲೆ ಬಗ್ಗೆ ಗೇಲಿ ಮಾಡುವವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಡಿಗ್ರಿ ಪ್ರಮಾಣಪತ್ರದ ಬಗ್ಗೆ ಮಾತನಾಡಲಿ. ನಾನು ಪಿಯುಸಿ ಮುಗಿಸಿದ್ದೇನೆ. ನಾನು ಒರಿಜಿನಲ್ ದಾಖಲಾತಿ ತೋರಿಸುತ್ತೇನೆ. ಅವರು ತೋರಿಸುತ್ತಾರ? ಪಿಯುಸಿ ಮುಗಿದ ಬಳಿಕ ವ್ಯವಹಾರಕ್ಕೆ ಮುಂದಾದ ಕಾರಣ ಓದು ಮುಂದುವರಿಸಲಿಲ್ಲ ಅಷ್ಟೆ ಎಂದು ವಿರೋಧಿಗಳ ಹೇಳಿಕೆಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್ ಉಪಸ್ಥಿತರಿದ್ದರು.



