Saturday, June 6, 2026
Google search engine

Homeದೇಶವಿಶ್ವ ಪರಿಸರಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಸಂದೇಶ : ಪರಿಸರ ಸಂರಕ್ಷಣೆಯನ್ನು ಜನ ಆಂದೋಲನವಾಗಿಸಿ

ವಿಶ್ವ ಪರಿಸರಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಸಂದೇಶ : ಪರಿಸರ ಸಂರಕ್ಷಣೆಯನ್ನು ಜನ ಆಂದೋಲನವಾಗಿಸಿ

ನವದೆಹಲಿ : ವಿಶ್ವ ಪರಿಸರ ದಿನದ ಅಂಗವಾಗಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‌ ನ ಸ್ಮಾರ್ಟ್ ಸಿಟಿ ಪಾರ್ಕ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಹಮ್ಮಿಕೊಳ್ಳಲಾಗಿರುವ “ಏಕ್ ಪೇಡ್ ಮಾ ಕೆ ನಾಮ್” (ತಾಯಿಯ ಹೆಸರಲ್ಲಿ ಒಂದು ಮರ) ಅಭಿಯಾನದ ಅಡಿಯಲ್ಲಿ ಸಸಿನೆಟ್ಟರು. ಈ ಸಂದರ್ಭದಲ್ಲಿ ದೇಶದ ಹಾಗೂ ರಾಜ್ಯದ ಜನತೆಗೆ ಶುಭ ಕೋರಿದ ಅವರು, “ಪರಿಸರ ಸುರಕ್ಷಿತವಾಗಿದ್ದರೆ ಮಾತ್ರ ಭೂಮಿಯ ಮೇಲಿನ ಜೀವಸಂಕುಲ ಸುರಕ್ಷಿತವಾಗಿರುತ್ತದೆ” ಎಂದು ಹೇಳಿದರು. ಸಸಿನಡುವುದು ಕೇವಲ ಒಂದು ಗಿಡ ನೆಡುವ ಕೆಲಸವಲ್ಲ, ಬದಲಿಗೆ ಅದು ಮಾನವೀಯತೆ, ಪ್ರಕೃತಿ ಮತ್ತು ಮುಂದಿನ ಪೀಳಿಗೆಯನ್ನು ರಕ್ಷಿಸುವ ಅಭಿಯಾನವಾಗಿದೆ. ಮರಗಳು ಉಳಿದರೆ ನೀರು, ಕಾಡು, ಭೂಮಿ ಮತ್ತು ಜೀವವೈವಿಧ್ಯತೆ ಸುರಕ್ಷಿತವಾಗಿರುತ್ತದೆ ಹಾಗೂ ಮಳೆ, ನದಿಗಳು ಮತ್ತು ಮಣ್ಣಿನ ಸಂರಕ್ಷಣೆಯೂ ಸಾಧ್ಯವಾಗುತ್ತದೆ ಎಂದರು.

ಪರಿಸರ ಸಂರಕ್ಷಣೆಯನ್ನು ಜನಆಂದೋಲನ ಮಾಡಲು ಕರೆ

ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆಯನ್ನು ತನ್ನ ವೈಯಕ್ತಿಕ ಜವಾಬ್ದಾರಿ ಎಂದು ಭಾವಿಸಬೇಕು ಮತ್ತು ಸಸಿನಡುವುದನ್ನು ಜೀವನದ ನಿರಂತರ ಭಾಗವಾಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮರಗಳು ಕೇವಲ ಹಸಿರನ್ನಷ್ಟೇ ನೀಡುವುದಿಲ್ಲ, ಬದಲಿಗೆ ಅವು ಜೀವನ, ಜೀವವೈವಿಧ್ಯ ಮತ್ತು ಭವಿಷ್ಯದ ಸುರಕ್ಷತೆಯ ಆಧಾರವಾಗಿವೆ. ಪರಿಸರವನ್ನು ಉಳಿಸಬೇಕಾದರೆ ಸಸಿನಡುವುದನ್ನು ಜನಆಂದೋಲನವನ್ನಾಗಿ ಮಾಡಬೇಕು, ಏಕೆಂದರೆ “ಮರವಿದ್ದರೆ ಮಾತ್ರ ನಾವು” ಎಂದು ಅವರು ಒತ್ತಿ ಹೇಳಿದರು.

ಐದು ವರ್ಷಗಳ ಹಿಂದೆ ನೆಟ್ಟ ಸಸಿ ಇಂದು ವಿಶಾಲ ಆಲದ ಮರ

ಸ್ಮಾರ್ಟ್ ಸಿಟಿ ಪಾರ್ಕ್‌ನಲ್ಲಿ 2021 ರಲ್ಲಿ ತಾವು ನೆಟ್ಟ ಆಲದ ಮರವನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, “ತಾವು ಅಮರಕಂಟಕ್‌ನಿಂದ ಪ್ರತಿದಿನ ಸಸಿ ನೆಡುವ ಸಂಕಲ್ಪ ಮಾಡಿದ್ದೆವು ಮತ್ತು ಭೋಪಾಲ್‌ಗೆ ಬಂದ ನಂತರ ಮೊದಲು ನೆಟ್ಟಿದ್ದು ಇದೇ ಸಸಿಯನ್ನು” ಎಂದು ನೆನಪಿಸಿಕೊಂಡರು. ಇಂದು ಆ ಸಸಿ ವಿಶಾಲವಾದ ಆಲದ ಮರವಾಗಿ ಬೆಳೆದು ನಿಂತಿದೆ. ಆ ಮರದ ಮೇಲೆ ಪಕ್ಷಿಗಳ ಚಿಲಿಪಿಲಿ ಮತ್ತು ಜೀವಜಂತುಗಳ ಚಟುವಟಿಕೆಯನ್ನು ನೋಡಿ ತಮಗೆ ಅಪಾರ ಸಂತೋಷ ಮತ್ತು ತೃಪ್ತಿ ಸಿಕ್ಕಿದೆ ಎಂದರು. ಮಕ್ಕಳನ್ನು ಪೋಷಿಸಿ ಬೆಳೆಸಿದಂತೆ, ಒಂದು ಸಸಿಯೂ ಕಾಲಾನಂತರದಲ್ಲಿ ವಿಶಾಲ ವೃಕ್ಷವಾಗಿ ಬೆಳೆದು ಸಮಾಜ ಮತ್ತು ಪ್ರಕೃತಿಯ ಸೇವೆ ಮಾಡುತ್ತದೆ ಎಂದು ಅವರು ಹೇಳಿದರು.

ವಿಶೇಷ ದಿನಗಳನ್ನು ಸಸಿನಡುವುದರೊಂದಿಗೆ ಜೋಡಿಸಲು ಮನವಿ

ಪ್ರತಿದಿನ ಸಸಿ ನೆಡಲು ಸಾಧ್ಯವಾಗದಿದ್ದರೆ, ಜನರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಾದರೂ ಖಂಡಿತವಾಗಿಯೂ ಗಿಡಗಳನ್ನು ನೆಡಬೇಕು ಎಂದು ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದರು. ಜನ್ಮದಿನ, ವಿವಾಹ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಜನ್ಮದಿನ ಮತ್ತು ಪೋಷಕರ ಸವಿನೆನಪಿನಂತಹ ಸಂದರ್ಭಗಳನ್ನು ಸಸಿನಡುವುದರೊಂದಿಗೆ ಜೋಡಿಸಲು ಅವರು ಆಶಿಸಿದರು. ಪ್ರಧಾನಿ ನರೇಂದ್ರ ಮೋದಿಯವರ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದ ಮೂಲಕ ದೇಶಾದ್ಯಂತ ಲಕ್ಷಾಂತರ ಜನರು ತಮ್ಮ ತಾಯಂದಿರ ಗೌರವಾರ್ಥವಾಗಿ ಸಸಿಗಳನ್ನು ನೆಡುತ್ತಿದ್ದಾರೆ. ತಾವು ಕೂಡ ತಮ್ಮ ದಿವಂಗತ ತಾಯಿ ಸುಂದರ್ ದೇವಿ ಅವರ ಸವಿನೆನಪಿನಲ್ಲಿ ಸಸಿಯೊಂದನ್ನು ನೆಟ್ಟಿರುವುದಾಗಿ ತಿಳಿಸಿದರು.

ಐದೂವರೆ ವರ್ಷಗಳಿಂದ ಮುಂದುವರಿದಿರುವ ಪ್ರತಿದಿನದ ಸಂಕಲ್ಪ

ಪರಿಸರವು ಕೇವಲ ಭಾಷಣಗಳು ಮತ್ತು ಚರ್ಚೆಗಳಿಂದ ಸುರಕ್ಷಿತವಾಗುವುದಿಲ್ಲ, ಅದಕ್ಕಾಗಿ ತಳಮಟ್ಟದಲ್ಲಿ ಕೆಲಸ ಮಾಡುವುದು ಅತ್ಯಗತ್ಯ ಎಂದು ಕೇಂದ್ರ ಸಚಿವರು ಹೇಳಿದರು. ಇದೇ ಆಲೋಚನೆಯೊಂದಿಗೆ ಅವರು ವರ್ಷಗಳ ಹಿಂದೆ ಪ್ರತಿದಿನ ಸಸಿ ನೆಡುವ ಸಂಕಲ್ಪ ಮಾಡಿದ್ದರು, ಅದು ಇಂದಿಗೂ ಮುಂದುವರಿದಿದೆ. ಕಳೆದ ಐದೂವರೆ ವರ್ಷಗಳಲ್ಲಿ ತಾವು ಸಸಿ ನೆಡದ ಒಂದೇ ಒಂದು ದಿನವೂ ಕಳೆದಿಲ್ಲ ಎಂದು ಅವರು ತಿಳಿಸಿದರು. ಈಗ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು, ಯುವಕರು ಮತ್ತು ನಾಗರಿಕರು ಈ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಸಮಾಜದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತಿದ್ದು, ಹೊಸ ಪೀಳಿಗೆಯು ಇದನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular