ಬೆಂಗಳೂರು : ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಹೇಳಿದ್ದು ಯಾರು? ಈ ಬಗ್ಗೆ ನಾನು ಮೊದಲಿನಿಂದಲೂ ಹೇಳಿದ್ದೇನೆ. ನಮ್ಮ ನಡುವೆ ಯಾವುದೇ ಗೊಂದಲವೇ ಇಲ್ಲ. ಕೆಲವು ಐಟಿ ಸೆಲ್ನವರು ಸ್ವಲ್ಪ ಹೆಚ್ಚಿನ ಪ್ರಚಾರ ಮಾಡಿದರು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಗುರುವಾರ ಹೇಳಿದ್ದಾರೆ.
ಇಂದು ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ, ಸಿಎಂ ಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ. ಅಧ್ಯಕ್ಷ ಆಗಿಯೇ ಪಕ್ಷದ ಕೆಲಸ ಮಾಡಬೇಕು ಅಂತೇನೂ ನಿಯಮವಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದ ನಂತರ ಇದುವರೆಗೂ ಒಂದು ಸರ್ಕಾರ ಸಹ ರಿಪೀಟ್ ಆಗಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ದುಡಿದರೆ ಕೂಲಿ ಸಿಕ್ಕಿಯೇ ಸಿಗುತ್ತದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕೆಲಸ ಮಾಡಿದ್ದೇವೆ ಅಂತ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರಿಗೆ ಅಧಿಕಾರ ಸಿಗಲೇಬೇಕು. 2028ರ ಬಗ್ಗೆ ಈಗಲೇ ಚರ್ಚೆ ಯಾಕೆ? ಇನ್ನೂ ಮಗುನೇ ಹುಟ್ಟಿಲ್ಲ ಚರ್ಚೆ ಯಾಕೆ? ನನಗೂ ಕೂಲಿ ಸಿಕ್ಕಿದೆ. ಮಂತ್ರಿ ಮಾಡಿದ್ದಾರೆ. ನನಗೆ ಡಬಲ್ ಸಮಾಧಾನ ಆಗಿದೆ. ಕೆಲಸ ಮಾಡುವವರಿಗೆ ಹುದ್ದೆಯ ಅವಶ್ಯಕತೆ ಇಲ್ಲ. ಹಿಂದಿನ ಚುನಾವಣೆ, ಮೊದಲಿನ ಚುನಾವಣೆ ಎಲ್ಲಾ ಸಂದರ್ಭದಲ್ಲಿ ಕೂಡ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಯಾರಿಗಾದರೂ ಅಸಮಾಧಾನ ಇದ್ದರೆ ಸರಿಪಡಿಸಬೇಕು. ಸರ್ಕಾರ ಟೇಕ್ಆಫ್ ಆಗುವುದಕ್ಕೆ ಸಮಯಬೇಕು. ಹೆಚ್ಚುವರಿ ಖಾತೆಗೆ ನಾನು ಬೇಡಿಕೆ ಇಟ್ಟಿದ್ದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನನಗೆ ಹೆಚ್ಚುವರಿಯಾಗಿ ಕ್ರೀಡಾ ಖಾತೆ ನೀಡಿ ಎಂದಿದ್ದೆ. ಅದನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಕ್ರೀಡಾ ಖಾತೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆವು. ಕ್ರೀಡೆಯಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡುತ್ತಿದ್ದೆವು. ಹಿಂದೆಯೂ ಧರಂ ಸಿಂಗ್ ಅವಧಿಯಲ್ಲಿ ಕ್ರೀಡಾ ಖಾತೆ ಕೇಳಿದ್ದೆ. ಈಗ ಪರಮೇಶ್ವರ್ ಅವರಿಗೆ ಕೊಟ್ಟಿದ್ದಾರೆ. ಅವರಿಗೆ ಕ್ರೀಡೆ ಬಗ್ಗೆ ಒಲವಿದೆ. ಅದಕ್ಕೆ ಕೇಳಿ ಪಡೆದಿರಬಹುದು ಎಂದರು.



