Monday, June 22, 2026
Google search engine

Homeರಾಜಕೀಯನೀಟ್‌ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದ ಕಾಂಗ್ರೆಸ್‌‍ ಸಮಾವೇಶ : ಆರ್‌.ಅಶೋಕ್‌

ನೀಟ್‌ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದ ಕಾಂಗ್ರೆಸ್‌‍ ಸಮಾವೇಶ : ಆರ್‌.ಅಶೋಕ್‌

ಬೆಂಗಳೂರು : ವೈದ್ಯಕೀಯ ಪ್ರವೇಶಾತಿ ಕೋರ್ಸ್‌ಗಳಿಗೆ ನಡೆದ ನೀಟ್‌-ಯುಜಿ 2026 ಪರೀಕ್ಷೆಗೆ ಕೆಲವು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕೇಂದ್ರಗಳಿಗೆ ಬಾರದಿರಲು ಕಾರಣವಾಗಿದ್ದೇ ಕಾಂಗ್ರೆಸ್‌‍ ಸಮಾವೇಶ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು, ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹೆಚ್ಚಿನ ವಾಹನಗಳು ವಿವಿಧ ಭಾಗಗಳಿಂದ ಆಗಮಿಸಿ ನಗರದಲ್ಲಿ ಸಂಚಾರಿ ದಟ್ಟಣೆ ಶುರುವಾಯಿತು. ಪರಿಣಾಮ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಭಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದರಿಂದ ಸಕಾಲಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾಂಗ್ರೆಸ್‌‍ ನೇರ ಹೊಣೆ ಎಂದು ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾದರು. ಇದು ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಬದ್ಧತೆಯನ್ನು ತೋರುತ್ತದೆ. ಆದರೆ ಕಾಂಗ್ರೆಸ್‌‍ ನಾಯಕರು ನಗರದಲ್ಲಿ ಸಂಚಾರ ದಟ್ಟಣೆ ಸೃಷ್ಟಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಂತೆ ತೊಂದರೆ ಮಾಡಿದರು. ಇದು ಯಾವ ಪುರುಷಾರ್ಥಕ್ಕೆ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು.

ನಗರದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನೀಟ್‌ ಬರೆಯುವ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆ ಪಕ್ಷದ ಸ್ವಯಂ ಸೇವಕರೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ದೇಶದ ಪ್ರಧಾನಿಯೇ ವಿಮಾನ ನಿಲ್ದಾಣದಲ್ಲಿ 45 ನಿಮಿಷ ಇರುವಾಗ ಕಾಂಗ್ರೆಸ್‌‍ನವರಿಗೆ ಎರಡುಮೂರು ಗಂಟೆ ತಡ ಮಾಡಿದ್ದರೆ ಗಂಟ್ಟು ಹೋಗುತ್ತಿತ್ತೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಅಷ್ಟಕ್ಕೂ ಸ್ವಲ್ಪ ಸಮಯ ವಿಳಂಬ ಮಾಡಿದ್ದರೆ ಹರಿಪ್ರಸಾದ್‌ ಅಧ್ಯಕ್ಷ ಸ್ಥಾನವನ್ನು ಯಾರೂ ಕಿತ್ತುಕೊಳ್ಳುತ್ತಿರಲಿಲ್ಲ. ಅವರೇ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದರು. ವೇದಿಕೆ ಮೇಲೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಆ ಪಕ್ಷದ ಕಾರ್ಯಕರ್ತರು ಮಾತನಾಡಲು ಬಿಡದೆ ಡಿಕೆ ಡಿಕೆ ಎಂದು ಕೂಗಿ ಇಡೀ ಕಾರ್ಯಕ್ರಮವನ್ನು ಹಾಳು ಮಾಡಿದರು. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಚಾರ ದಟ್ಟಣೆಯಿಂದ ತೊಂದರೆಯಾಗಿದೆ ಎಂದು ಸ್ವತಃ ವಿದ್ಯಾರ್ಥಿಗಳು ಮತ್ತು ಪೋಷಕರೇ ದೂರಿದ್ದಾರೆ. ಭಾನುವಾರ ಏನೆಲ್ಲ ಅದ್ವಾನ ಆಗಿದೆಯೋ ಅದಕ್ಕೆ ಕಾಂಗ್ರೆಸ್‌‍ ಕಾರಣ ಎಂದು ಆಪಾದಿಸಿದರು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ನಾನು ದೆಹಲಿಗೆ ತೆರಳುತ್ತಿದ್ದೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷರು ಸಮಯ ಕೊಟ್ಟಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿದ್ದಾರೆ. ನಮಗೆ ಸುಳಿವು ಸಿಕ್ಕಿದೆ. ಯಾರ್ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಬಗ್ಗೆ ಇನ್ನು ಖಚಿತ ಆಗಿಲ್ಲ. ಪುಕ್ಕಟೆಯಾಗಿ ಯಾರೂ ಅಡ್ಡ ಮತದಾನ ಮಾಡಿಲ್ಲ. ಸ್ವಂತ ಅಭಿವೃದ್ಧಿ ಮಾಡುವುದಕ್ಕೆ ದುಡ್ಡು ತೆಗೆದುಕೊಂಡಿದ್ದಾರೆ ಎಂದು ದೂರಿದರು.

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಪಕ್ಷದಲ್ಲಿ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳವನ್ನು ರಾಜಕೀಯವಾಗಿ ಬಳಸುವುದು ಬೇಡ ಎಂಬುದು ಎಲ್ಲರ ಅಭಿಪ್ರಾಯ ಇದೆ. ಈ ಕುರಿತು ದೆಹಲಿಯಲ್ಲಿ ವಿಜಯೇಂದ್ರ ಜೊತೆ ಮಾತಾಡುತ್ತೇನೆ ಎಂದರು.

ಕುದುರೆ ವ್ಯಾಪಾರ ಮಾಡಿದ ಕಾಂಗ್ರೆಸ್‌‍ನವರು ನಾವು ಮಾಡಿಲ್ಲ ಎಂದು ಹೇಳಲಿ. ಇದನ್ನು ನಾವು ಆಪರೇಷನ್‌ ಹಸ್ತ ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದರು. ಪಂಚಾಯತ್‌ ಮಟ್ಟಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿಸ್ತರಣೆ ವಿಚಾರವಾಗಿ, ಈಗಾಗಲೇ 20-30 ಲಕ್ಷದ ಗ್ಯಾರಂಟಿ ಸ್ಕೀಮ್‌ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ರದ್ದು ಮಾಡುವುದಿಲ್ಲ ಅನುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳೇ ನಾಲಾಯಕ್‌. ಇನ್ನು ಪಂಚಾಯತ್‌ ಮಟ್ಟಕ್ಕೆ ತೆಗೆದುಕೊಂಡು ಹೋದರೆ 300-400 ಕೋಟಿ ಇವರೇ ತಿಂದು ಹಾಕುತ್ತಾರೆ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular