Friday, June 26, 2026
Google search engine

Homeದೇಶಶಿವರಾಜ್ ಸಿಂಗ್ ಚೌಹಾಣ್ ಇಂದು ಉತ್ತರಾಖಂಡ ಪ್ರವಾಸದಲ್ಲಿ : ರೈತರನ್ನು ಭೇಟಿಯಾಗಲಿರುವ ಕೇಂದ್ರ ಸಚಿವರು

ಶಿವರಾಜ್ ಸಿಂಗ್ ಚೌಹಾಣ್ ಇಂದು ಉತ್ತರಾಖಂಡ ಪ್ರವಾಸದಲ್ಲಿ : ರೈತರನ್ನು ಭೇಟಿಯಾಗಲಿರುವ ಕೇಂದ್ರ ಸಚಿವರು

ನವದೆಹಲಿ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು (ಶುಕ್ರವಾರ) ಉತ್ತರಾಖಂಡ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಈ ಪ್ರವಾಸದಲ್ಲಿ ರೈತರು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಮೇಲೆಯೇ ಮುಖ್ಯ ಗಮನ ಇರಲಿದೆ. ತಮ್ಮ ಈ ಭೇಟಿಯಲ್ಲಿ ಅವರು ಒಂದೆಡೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯದ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮತ್ತೊಂದೆಡೆ ನೇರವಾಗಿ ಹೊಲ-ಗದ್ದೆಗಳಿಗೆ ತೆರಳಿ ರೈತರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮೇಳನದಲ್ಲೂ ಪಾಲ್ಗೊಳ್ಳಲಿದ್ದಾರೆ.

ಕೃಷಿ, ರೈತರು ಮತ್ತು ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಾಖಂಡ ಪ್ರವಾಸದ ಅವಧಿಯಲ್ಲಿ ವಿವಿಧ ಸಭೆಗಳು, ಇಲಾಖಾವಾರು ಪರಿಶೀಲನಾ ಕಾರ್ಯಕ್ರಮಗಳು ಮತ್ತು ಕ್ಷೇತ್ರ ಭೇಟಿಗಳಲ್ಲಿ (ಫೀಲ್ಡ್ ವಿಸಿಟ್) ಭಾಗಿಯಾಗಲಿದ್ದಾರೆ. ಬೆಳಿಗ್ಗೆ ಕೇಂದ್ರ ಸಚಿವ ಚೌಹಾಣ್ ಅವರು ಗೋವಿಂದ ವಲ್ಲಭ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪಂತನಗರದಲ್ಲಿ ಆಯೋಜಿಸಿರುವ ಹಳೆಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅದೇ ರೀತಿ, ರುದ್ರಾಪುರದಲ್ಲಿ ಹಮ್ಮಿಕೊಂಡಿರುವ “ಖೇತ್ ಬಚಾವೋ ಅಭಿಯಾನ” (ಹೊಲ ಉಳಿಸಿ ಅಭಿಯಾನ) ಅಡಿಯಲ್ಲಿ ಕೇಂದ್ರ ಸಚಿವರು ರೈತರೊಂದಿಗೆ ಸಂವಾದ, ಹೊಲಗಳ ವೀಕ್ಷಣೆ, ಬೆಳೆಗಳ ಪರಿಶೀಲನೆ ಮತ್ತು ಕೃಷಿ ವಿಷಯಗಳ ಕುರಿತು ಪ್ರತ್ಯಕ್ಷ ಚರ್ಚೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಭಾಗವಹಿಸಲಿದ್ದಾರೆ.

ಇದಾದ ನಂತರ, ಪಂತನಗರದಲ್ಲಿ ಮುಖ್ಯಮಂತ್ರಿ ಧಾಮಿ ಅವರೊಂದಿಗೆ ನಡೆಯಲಿರುವ ಸಭೆಯಲ್ಲಿ, ರಾಜ್ಯದಲ್ಲಿ ಕೃಷಿಯ ಸಮಗ್ರ ಅಭಿವೃದ್ಧಿ, ರೈತರ ಹಿತರಕ್ಷಣೆ, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು. ಈ ಸಂದರ್ಭದಲ್ಲಿ, ಯೋಜನೆಗಳ ಲಾಭ ರೈತರಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಎಷ್ಟು ಪರಿಣಾಮಕಾರಿಯಾಗಿ ತಲುಪುತ್ತಿದೆ ಮತ್ತು ಮುಂದೆ ಯಾವ ಕ್ಷೇತ್ರಗಳಲ್ಲಿ ವೇಗವನ್ನು ಹೆಚ್ಚಿಸುವ ಅಗತ್ಯವಿದೆ ಎಂಬುದರ ಕುರಿತು ಪರಿಶೀಲನೆ ನಡೆಸಲಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular