ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆಯುವ ಡಿವೈಎಫ್ ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳ ದಲ್ಲಿ ಆಳವಡಿಸಲಾದ ಟಿಪ್ಪು ಸುಲ್ತಾನ್ ಕಟೌಟ್ ತೆರವುಗೊಳಿಸಬೇಕು ಎಂದು ಕೊಣಾಜೆ ಪೊಲೀಸ್ ಇನ್ ಸ್ಟೆಕ್ಟರ್ ನೋಟಿಸ್ ನೀಡಿರೋ ಘಟನೆ ನಡೆದಿದೆ.

ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ 6 ಅಡಿ ಉದ್ದದ ಈ ಕಟೌಟನ್ನು ಅನುಮತಿಯಿಲ್ಲದೆ ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕಟೌಟ್ ತೆರವುಗೊಳಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿವೈಎಫ್ ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ‘ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಪ್ರತಿಮೆ, ಫ್ಲೆಕ್ಸ್ ಹಾಕಲಾಗಿದೆ. ಹರೇಕಳ ಕಚೇರಿ ಬಳಿ ಕಾರ್ಯಕರ್ತರು ಹಾಕಿರುವ ಟಿಪ್ಪುಸುಲ್ತಾನ್ ಕಟೌಟ್ ನ್ನು ತೆರವುಗೊಳಿಸಲು ಪೊಲೀಸರು ಸೂಚನೆ ನೀಡಿರುವುದು ಎಷ್ಟು ಸರಿ? ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸದಂತೆ ಸರಕಾರ ನಿಷೇಧ ಹಾಕಿದೆಯೇ? ಯಾವ ಸರಕಾರ ನಿಷೇಧ ಹೇರಿದ್ದು ? ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಇರುವುದಲ್ಲವೇ? ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಬಿಜೆಪಿ ಸರಕಾರ ಇದೆಯೇ ?’ ಎಂದು ಪ್ರಶ್ನಿಸಿದ್ದಾರೆ.
