ಶ್ರೀರಂಗಪಟ್ಟಣ: ಮನುಷ್ಯನಿಗೆ ಆರೋಗ್ಯ, ಐಶ್ವರ್ಯ ಮತ್ತು ಸಂಪತ್ತಿಗಿಂತಲೂ ಅಮೂಲ್ಯವಾದದ್ದು, ಆದ್ದರಿಂದ ಪ್ರತಿಯೊಬ್ಬ ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಹೊಸಹಳ್ಳಿ ಗ್ರಾಮ ಪಂಚಾಯ್ತಿ ಪಿ.ಡಿ.ಓ. ಶಶಿಕಲಾ.ಎಸ್.ಡಿ ಕರೆ ನೀಡಿದರು.
ರಾಷ್ಟ್ರೀಯ ಸೇವಾಯೋಜನೆ ಜೆ.ಎಸ್.ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ. ಜೆ.ಎಸ್.ಎಸ್. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಹೊಸಹಳ್ಳಿ ಗ್ರಾಮಪಂಚಾಯ್ತಿ ಸಹಯೋಗದಲ್ಲಿ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಆರೋಗ್ಯ ತಪಾಸಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ಜನ ತತ್ತರಿಸಿ ಹೋಗಿದ್ದರು. ಎಷ್ಟೇ ಹಣ ಇದ್ದರೂ ಸಹ ದೇಶದಲ್ಲಿ ಲಕ್ಷಾಂತರ ಜನರನ್ನು ನಾವು ಕಳೆದುಕೊಳ್ಳಬೇಕಾಯಿತು. ಸರ್ಕಾರ ಹಲವಾರು ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಅದರಂತೆ ಜೆ.ಎಸ್.ಎಸ್. ಸಂಸ್ಥೆಯವರು ಕೂಡ ನಿಮ್ಮ ಮನೆ ಬಾಗಿಲಿಗೆ ಆರೋಗ್ಯ ತಪಾಸಣೆ ಮಾಡಲು ಬಂದಿದ್ದಾರೆ. ಹೊಸಹಳ್ಳಿ, ಮೊಗರಹಳ್ಳಿ, ಕಾರೇಕುರ ಗ್ರಾಮದಲ್ಲಿ ಸುಮಾರು ೩೫೦೦ ಕುಟುಂಬಗಳಿದ್ದು ೬೫೦೦ ಜನಸಂಖ್ಯೆಯನ್ನು ಹೊಂದಿದೆ. ಎಲ್ಲರೂ ಸಹ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಜೆ.ಎಸ್.ಎಸ್. ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಜೆ.ಎಸ್.ಎಸ್. ದಂತ ವೈದ್ಯಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಎಂ.ಆರ್, ಮಾತನಾಡಿ ದಂತ ಹಾಗೂ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪರೀಕ್ಷೆ ಮಾಡಿಸಿಕೊಂಡು ಪರಿಹಾರ ಪಡೆಯಬಹುದಾಗಿದ್ದು ಮುನ್ನೆಚ್ಛರಿಕೆಯ ಕ್ರಮವನ್ನು ಕೈಗೊಳ್ಳಬಹುದು ಎಂದರು.
ಗ್ರಾ.ಪಂ ಅಧ್ಯಕ್ಷ ಚೆಲುವರಾಜು ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರಿಕರಣವಾಗುತ್ತಿರುವ ಸಂದರ್ಭದಲ್ಲಿ ಜೆ.ಎಸ್.ಎಸ್. ಸಂಸ್ಥೆಯವರು ನಮ್ಮ ಮನೆ ಬಾಗಿಲಿಗೆ ಬಂದು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಇದರ ಸದುಪಯೊಗವನ್ನು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಶಿಬಿರಾಧಿಕಾರಿ ಡಾ. ತಿಪ್ಪೇಸ್ವಾಮಿ.ಹೆಚ್.ಎಂ, ಡಾ. ಸತೀಶ್ಚಂದ್ರ, ಡಾ. ಪ್ರವೀಣ್ ಕುಲಕರ್ಣಿ, ಡಾ. ಕೃಷ್ಣಾ, ಅನುಶ್ರೀ.ಎಸ್.ಎಂ, ಗ್ರಾಪಂ ಸದಸ್ಯರಾದ ಶ್ರೀಕಂಠ, ಉಮಾ, ಯೋಗೇಶ್ ಹಾಜರಿದ್ದರು.