ಚಿಕ್ಕಬಳ್ಳಾಪುರ: ಯಾವುದೇ ಪಕ್ಷ ಮತ್ತು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಎಲ್ಲರೂ ರೈತ ವಿರೋಧಿಗಳೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ಉತ್ಪಾದನೆ ಆಗುವ ಎಲ್ಲಾ ವಸ್ತುಗಳಿಗೂ ಬೆಲೆ ನಿಗದಿ ಇದೆ. ಆದರೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಲೆ ನಿಗದಿಯೂ ಇಲ್ಲ. ಈ ಕಾರಣದಿಂದಾಗಿ ರೈತರು ಕಷ್ಟ ಮತ್ತು ನಷ್ಟ ಪಡುವಂತಾಗುತ್ತದೆ ಎಂದರು.
ಕೃಷಿ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡಲಿ: ದೆಹಲಿಯಲ್ಲಿ ಪಂಜಾಬ್ನಿಂದ ಬಂದ ರೈತರು ಮಾಡಿದ ಹೋರಾಟ ನಿಜಕ್ಕೂ ರೈತರ ಒಗ್ಗಟ್ಟನ್ನು ಪ್ರದರ್ಶಿಸಿದೆ. ಈ ಹೋರಾಟದಿಂದಲಾದರೂ ಸಹ ಕೇಂದ್ರ ಸರ್ಕಾರ ಕಣ್ಣು ತೆರೆದು ರಾಷ್ಟ್ರದಲ್ಲಿ ಬೆಂಬಲ ಬೆಲೆ ನಿಗದಿ ಪಡಿಸಬೇಕು ಇಲ್ಲವಾದರೆ ಕೇಂದ್ರ ಸರ್ಕಾರದ ವಿರುದ್ಧ ರೈತ ಸಮೂಹ ತೀವ್ರ ಹೋರಾಟ ಮಾಡುವ ಅನಿವಾರ್ಯತೆ ಆಗುತ್ತದೆ ಎಂದರು. ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಸ್ಟಾಲಿನ್ ರವರ ಸ್ನೇಹವನ್ನು ಮತ್ತಷ್ಟು ಬೆಸೆದುಕೊಳ್ಳುವ ಸಲುವಾಗಿ ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.