ಮೈಸೂರು: ಜಿಲ್ಲೆಯಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಡೆದು, ಜಿಲ್ಲೆಯ ಫಲಿತಾಂಶ ಮಟ್ಟವನ್ನು ಮೇಲು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಎಂದು ಉಪ ನಿರ್ದೇಶಕ ಎಚ್.ಕೆ. ಪಾಂಡು ತಿಳಿಸಿದರು.
ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಹೀಗಾಗಿ ಮೊದಲನೇ ದಿನ ಬೆಳಗ್ಗೆ ಒಂಭತ್ತಕ್ಕೆಲ್ಲ ಪರೀಕ್ಷಾ ಕೊಠಡಿಗೆ ಹಾಜರಾಗಿ ಆತಂಕ ದೂರ ಮಾಡಿಕೊಳ್ಳಲು ತಿಳಿಸಲಾಗಿದೆ. ಇನ್ನು, ವಿದ್ಯಾರ್ಥಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಎಲ್ಲರೂ ಶಾಲಾ ಸಮವಸ್ತ್ರ ಧರಿಸಿರಬೇಕು. ಮೊಬೈಲ್, ಸ್ಮಾರ್ಟ್ವಾಚ್ ಮೊದಲಾದವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ೩೫, ಗ್ರಾಮೀಣ ಪ್ರದೇಶದಲ್ಲಿ ೯೭ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೩೨ ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ ಎಲ್ಲ ರೀತಿಯ ವಿದ್ಯಾರ್ಥಿಗಳು ಸೇರಿದಂತೆ ೪೦,೩೩೩ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ೨೦,೦೪೬ ಮಂದಿ ಪುರುಷರು, ೨೦,೨೮೭ ಮಹಿಳೆಯರು ಸೇರಿದ್ದಾರೆಂದರು.
ಮಾ. ೨೫ ರ ಸೋಮವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ ರವರೆಗೆ ಪ್ರಥಮ ಭಾಷೆ, ೨೭ರ ಬುಧವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ ರವರೆಗೆ ಸಮಾಜ ವಿಜ್ಞಾನ, ೩೦ರ ಶನಿವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ ರವರೆಗೆ ವಿಜ್ಞಾನ, ಏಪ್ರಿಲ್ ಎರಡರ ಮಂಗಳವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ರವರೆಗೆ ಗಣಿತ, ಏ.೩ರ ಬುಧವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ರವರೆಗೆ ಆಯ್ದ ಕೇಂದ್ರಗಳಲ್ಲಿ ಪರ್ಯಾಯ ವಿಷಯ, ಏ.೪ರ ಬೆಳಗ್ಗೆ ೧೦.೧೫ರಿಂದ ಮಧ್ಯಾಹ್ನ ೧.೧೫ ರವರೆಗೆ ತೃತೀಯ ಭಾಷೆ, ಏ.೬ರ ಶನಿವಾರ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೧೫ ರವರೆಗೆ ದ್ವಿತೀಯ ಭಾಷೆ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.