ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾ.ಪಂ. ಅಧ್ಯಕ್ಷರಾಗಿ ನಾಗಮಣಿಸತೀಶ್ ಮತ್ತು ಉಪಾಧ್ಯಕ್ಷೆಯಾಗಿ ಸುಶೀಲಹರೀಶ್ ಆಯ್ಕೆಯಾದರು.
ಪಂಚಾಯತಿ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನಾಗಮಣಿಸತೀಶ್ ಮತ್ತು ಶೋಭಾನಟರಾಜು ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಸುಶೀಲಹರೀಶ್ ಮತ್ತು ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಆನಂತರ ನಡೆದ ಚುನಾವಣೆಯಲ್ಲಿ ತಲಾ ೮ ಮತಗಳನ್ನು ಗಳಿಸಿದ ನಾಗಮಣಿ ಸತೀಶ್ ಮತ್ತು ಸುಶೀಲ ಹರೀಶ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದರು. ಇವರ ವಿರುದ್ಧ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶೋಭಾ ನಟರಾಜು ಮತ್ತು ಮಂಜುನಾಥ್ ತಲಾ ೭ ಮತಗಳನ್ನು ಪಡೆದು ಒಂದು ಮತಗಳ ಅಂತರದಿಂದ ಪರಾಭವ ಗೊಂಡರು.
ಈವರೆಗೆ ಅಧ್ಯಕ್ಷರಾಗಿದ್ದ ರಾಧಮ್ಮ ಮತ್ತು ಉಪಾಧ್ಯಕ್ಷ ಕೆ. ಸಿ. ರವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಇಓ ಆರ್. ಕೃಷ್ಣಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಚುನಾವಣಾ ಸಭೆಯಲ್ಲಿ ಸದಸ್ಯರಾದ ದೊಡ್ಡಸ್ವಾಮಿ, ಕೆ.ಎಂ. ಜಗದೀಶ್, ಮಂಜುಳ, ರಮೇಶ್, ಪ್ರಭಾವತಿ, ಶೈಲಾ, ಹೆಚ್. ವಿ. ಗೀತಾ, ಕೆ. ಆರ್. ಪ್ರಕಾಶ್, ರುಕ್ಮಿಣಿ, ಪಿಡಿಒ ಎಸ್. ನಾಗೇಶ್, ಕಾರ್ಯದರ್ಶಿ ಬೋರೇಗೌಡ, ಬಿಲ್ ಕಲೆಕ್ಟರ್ ಅಶೋಕ ಹಾಜರಿದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮದ ಮುಖಂಡರಾದ ರಾಮೇಗೌಡ, ತೀರ್ಥೇಗೌಡ, ಚಿಕ್ಕಯ್ಯ, ವೇಣುಗೋಪಾಲ್ ಮತ್ತು ಗ್ರಾಮಸ್ಥರು ಅಭಿನಂದಿಸಿದರು.