ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹೆರಿಗೆ ಆದ ನಂತರ ಪ್ರತಿ ಬಾಣಂತಿ ಮನೆಗೆ,ಒಂದೂವರೆ ತಿಂಗಳಲ್ಲಿ ವಾರಕ್ಕೊಮ್ಮೆ ಭೇಟಿ ಕೊಟ್ಟು ಬಾಣಂತಿಯ ಮತ್ತು ಹಸುಗೂಸಿನ ಆರೋಗ್ಯ ವಿಚಾರಿಸ ಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.
ಅವರು ಕೆ.ಆರ್.ನಗರ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಆಶಾ ಸುಗಮಕಾರರ ಮಾಸಿಕ ಸಭೆಯಲ್ಲಿ ಮಾತನಾಡಿದರು. ತಾಯಿಯ ಅಥವಾ ಮಗುವಿನ ಆರೋಗ್ಯದಲ್ಲಿ, ಏನಾದರೂ ಏರು-ಪೇರಾದಲ್ಲಿ, ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಮತ್ತು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಗಮನಕ್ಕೆ ತಿಳಿಸುವುದು ಅಥವಾ ವೈದ್ಯಾದಿಕಾರಿಗಳಿಗೆ ಸಂಪರ್ಕ ಮಾಡಿ ತಿಳಿಸಿ ಎಂದರಲ್ಲದೆ ತುರ್ತು ಪರಿಸ್ಥಿತಿ ಇದ್ದರೆ ನಗು ಮಗು ಅಥವಾ ೧೦೮ ಅಂಬುಲೆನ್ಸ್ ಕರೆಸಿ ಆಸ್ಪತ್ರೆಯಲ್ಲಿ ದಾಖಲು ಮಾಡಿಸಿ, ಸೂಕ್ತ ಚಿಕಿತ್ಸೆ ಕೊಡಿಸುವುಂತೆ ಮಾಹಿತಿ ನೀಡಿದರು.
ಮಗು ಒಂದುವರೆ ವರ್ಷ ಆಗುವವರೆಗೂ ಮೂರು ತಿಂಗಳಿಗೊಮ್ಮೆ ೩, ೬, ೯,೧೨, ೧೫ ತಿಂಗಳವರೆಗೆ ಮನೆ ಭೇಟಿ ಕೊಟ್ಟು, ಮಗುವಿಗೆ ಯಾವ ಸಮಯದಲ್ಲಿ ಚುಚ್ಚು ಮದ್ದು ಹಾಕಿಸಿದ್ದಾರೆ ಎಂಬ ಮಾಹಿತಿ ಪಡೆದು ಕೊಳ್ಳಿ, ಒಂದು ವೇಳೆ ಚುಚ್ಷು ಮದ್ಸು ಪಡೆಯದೇ ಇದ್ದಲ್ಲಿ ಸಂಬಂದ ಪಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ತಾಲ್ಲೂಕಿನಲ್ಲಿ ಹುಟ್ಟು ನ್ಯೂನತೆ ಇರುವ ಒಟ್ಟು ೪೦ ಮಕ್ಕಳ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಯುಷ್ಮಾನ್ ಕ್ಷೇಮ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತರು ಗಮನ ಹರಿಸಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡ ವೈಧ್ಯಾದಿಕಾರಿಗಳ ಗಮನಕ್ಕೆ ತಂದು, ಸೂಕ್ತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಕೊಡಿಸಲು ಪೋಷಕರ ಮನ ವಲಿಸುವಂತೆ ಸಭೆಯಲ್ಲಿದ್ದ ಆಶಾ ಸುಗಮಕಾರರಿಗೆ ತಿಳಿಸಿದರು.
ಸೀಳು ತುಟಿ, ಸೊಟ್ಟಕಾಲು, ಬುದ್ಧಿಮಾಂದ್ಯತೆ, ಹೃದಯದಲ್ಲಿ ರಂದ್ರ ಇರುವ ಮಕ್ಕಳು , ಕಿವಿ ಕೇಳಿಸದಿರುವ, ಹುಟ್ಟಿನಿಂದ ಪೊರೆ ಬಂದು ಕಣ್ಣು ಕಾಣಿಸದಿರುವ, ಆಟಿಸಮ್ , ಕಲಿಕೆಯಲಿ ಹಿಂದುಳಿದ ಮತ್ತು ಬೆಳವಣಿಗೆ ಕುಂಟಿತವಾಗಿರುವ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ನೆರವಾಗಬೇಕೆಂದು ತಿಳಿಸಿದರು. ೧೫ ಮಕ್ಕಳಿಗೆ ತೀವ್ರವಾದ ಅಪೌಷ್ಟಿಕತೆ ಮತ್ತು ೯೮ ಮಕ್ಕಳಿಗೆ ಸಾಧಾರಣ ಅಪೌಷ್ಟಿಕತೆ ಇರುವ ಬಗ್ಗೆ ಆಯಾಯ ವ್ಯಾಪ್ತಿಯ ಅಶಾ ಕಾರ್ಯಕರ್ತೆಯರು, ಅಂಗನಾಡಿ ಕಾರ್ಯಕರ್ತೆಯರೊಂದಿಗೆ ಸಮನ್ಮಯ ಸಾಧಿಸಿ, ಉತ್ತಮ ಪೌಷ್ಠಿಕ ಆಹಾರ, ಕಬ್ಬಿಣಾಂಶದ ಟಾನಿಕ್ ಗಳನ್ನು ಓದಗಿಸಲು ತಿಳಿಸಲಾಯಿತು.
೨೦ ಆಶಾ ಕಾರ್ಯಕರ್ತೆಯರಿಗೆ ಒಬ್ಬರು ಆಶಾ ಸುಗಮಕಾರರು(ಫೆಸಿಲಿಟೇಟರ್) ಇದ್ದು, ಅವರಿಗೆ ಮಾಸಿಕ ಹೆಚ್ಚುವರಿಯಾಗಿ ೬೦೦೦ ಪ್ರೋತ್ಸಾಹ ಧನ ಕೊಡಲಾಗುತ್ತದೆ ಅಲ್ಲದೆ ಅಶಾ ಕಾರ್ಯಕರ್ತೆಯರ ಬಾಕಿ ಭತ್ಯೆಯನ್ನು ಶೀಘ್ರವಾಗಿ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು. ಈ ಸಭೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರಾದ ಡಾ.ರೇವಣ್ಣ, ಡಾ.ದಿನೇಶ್, ಡಾ.ಮೊನಿಕಾ, ಡಾ.ಅಂಬಿಕಾ, ಆಶಾ ಮೇಲ್ವಿಚಾರಕಿ ಶೋಭಾ, ಕ್ಷೇತ್ರ ಮೇಲ್ವಿಚಾರಕಿ ಬೇಬಿ ರೇಖಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಾಗವೇಣಿ ಮತ್ತು ತಾಲ್ಲೂಕಿನ ಎಲ್ಲಾ ಸುಗಮಕಾರರು (ಫೆಸಿಲಿಟೇಟರ್) ಭಾಗವಹಿಸಿದ್ದರು.