ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದಲ್ಲಿ ಕೇಸರಿ ಹಾಗೂ ನೀಲಿ ಧ್ವಜಗಳನ್ನು ಹಾರಿಸುವ ಸಂಬಂಧವಾಗಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಪೊಲೀಸರು ಇಬ್ಬರನ್ನು ಬಂಧಿಸಿ, ೨೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೇಟಗೇರಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಧ್ವಜ ಕಟ್ಟೆಯಲ್ಲಿ ಜನವರಿ ೨೨ರಂದು ರಾಮ ಮಂದಿರ ಉದ್ಘಾಟನೆಯ ಸಂಬಂಧ ಕೇಸರಿ ಧ್ವಜ ಹಾರಿಸಲಾಗಿತ್ತು. ಇದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರ ಅನುಮತಿ ಕೂಡ ಪಡೆಯಲಾಗಿತ್ತು. ಶುಕ್ರವಾರ ಕೇಸರಿ ಧ್ವಜವನ್ನು ಇಳಿಸಿ ನೀಲಿ ಬಣ್ಣದ ಧ್ವಜ ಹಾರಿಸಲಾಗಿತ್ತು. ಇದೇ ವಿಚಾರವಾಗಿ ಶುಕ್ರವಾರ ತಡರಾತ್ರಿ ಬೇರೆಬೇರೆ ಸಮುದಾಯದ ಯುವಕರ ಮಧ್ಯೆ ಜಗಳ ಶುರುವಾಯಿತು. ವಾದ ವಿವಾದ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸಿ ಘರ್ಷಣೆಗೆ ತಿರುಗಿತು. ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಕುಲಗೋಡ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.