ಚೆನ್ನೈ : ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ರಕ್ಷಿಸಿ ಕರೆಯ ಬಗ್ಗೆ ಟೀಕಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ನಿಷೇಧಿತ ಪಿಎಫ್ಐನ ರಾಜಕೀಯ ಘಟಕವಾದ ಎಸ್ಡಿಪಿಐ ಬೆಂಬಲ ಪಡೆದುಕೊಂಡಿರುವ ಹಾಗೂ ಸಂವಿಧಾನಕ್ಕೆ ಬೆಂಕಿ ಹಚ್ಚಿದ್ದಕ್ಕೆ ಹೆಸರಾದ ಡಿಎಂಕೆ ಜೊತೆ ಮೈತ್ರಿ ಸಾಧಿಸಿದ ಪಕ್ಷಕ್ಕೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಉತ್ತರ ಚೆನ್ನೈ ಅಭ್ಯರ್ಥಿ ಆರ್.ಸಿ ಪೌಲ್ ಕನಗರಾಜ್ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡು ಸ್ಮೃತಿ ಮಾತನಾಡುತ್ತಿದ್ದರು. ತನ್ನ ಆಧ್ಯಾತ್ಮಿಕ ಶಕ್ತಿಗೆ ಹೆಸರು ಪಡೆದ ರಾಜ್ಯದಲ್ಲಿ ನಾನಿಂದು ನಿಂತಿದ್ದೇನೆ. ಈ ರಾಜ್ಯ ನಮ್ಮ ಸಂಸ್ಕೃತಿಗೆ ಹೆಸರು ಪಡೆದಿದೆ, ಇದೇ ಕಾರಣಕ್ಕೆ ಡಿಎಂಕೆ ನಾಯಕರು ಸನಾತನ ಧರ್ಮದ ಮೇಲೆ ದಾಳಿ ನಡೆಸಿದಾಗ ದೇಶ ಆಕ್ರೋಶಿತವಾಗಿದೆ. ಡಿಎಂಕೆ ನಾಯಕರು ಹಿಂದೂ ಧರ್ಮಕ್ಕೆ ಅಪಖ್ಯಾತಿ ತಂದಿದ್ದಾರೆ. ಇಂದು ಅವರು ಭಾರತ ಮತ್ತು ಭಾರತೀಯತೆ ಬಗ್ಗೆ ಮಾತನಾಡುವಾಗ ದೇಶದೆದುರು ಅವರ ಬಣ್ಣ ಬಯಲಾಗಿದೆ, ಎಂದು ಅವರು ಹೇಳಿದರು.
ನಮ್ಮ ಅಜೆಂಡಾ ವಿಕಸಿತ ಭಾರತ ಎಂದು ಬಿಜೆಪಿ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಭಾರತಕ್ಕೆ ತಮ್ಮ ಅಜೆಂಡಾ ಏನೆಂದು ಇಂಡಿಯಾ ಮೈತ್ರಿಕೂಟ ಹೇಳಬಹುದೆ ಈ ಮೈತ್ರಿಕೂಟಕ್ಕೆ ನೇತಾರರು ಮತ್ತು ನೀತಿಯಿಲ್ಲ ಆದರೆ ದೇಶವನ್ನು ಲೂಟುವ ಉದ್ದೇಶ ಅವರಿಗಿದೆ ಎಂದು ನಮಗೆ ಗೊತ್ತು, ಎಂದು ಆರೋಪಿಸಿದರು.