ಚನ್ನಪಟ್ಟಣ: ರಾಜ್ಯದಲ್ಲಿ ಬರದಿಂದ ನೀರಿನ ಅಭಾವ ಉಂಟಾಗಿ ನೀರಿನ ಹಾಹಾಕಾರಾ ಹೆಚ್ಚಾಗುತ್ತಿದ್ದಂತೆ ರೋಗ ರುಜಿನಗಳು ಸಹ ಹೆಚ್ಚಾಗುವ ಆತಂಕ ಉಂಟಾಗಿದೆ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಶನಿವಾರ ನಡೆದ ೧೮೫ ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿ, ಮನುಷ್ಯನಿಗೆ ಶುದ್ಧ ಗಾಳಿಯಷ್ಟೇ ಶುದ್ಧ ಕುಡಿಯುವ ನೀರು ಸಹ ಮುಖ್ಯವಾಗಿದ್ದು, ಇಂದು ಬರದ ನಡುವೆ ತಮಿಳುನಾಡಿಗೆ ನೀರನ್ನು ಹರಿಸಿದ ರಾಜ್ಯ ಸರ್ಕಾರದ ವೈಪಲ್ಯದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಇದರ ನಡುವೆ ಅಂತರ್ಜಲ ಸಂಪೂರ್ಣ ಕುಸಿತವಾಗಿ ಕೊಳವೆಬಾವಿಯಲ್ಲಿ ಬರುವ ಪ್ಲೋರೈಡ್ ವಿಷಾಂಶದ ನೀರನ್ನು ಕುಡಿಯುವಂತಾಗಿದ್ದು ಈಗಾಗಲೆ ಬೆಂಗಳೂರಿನಲ್ಲಿ ಕೆಲವರಿಗೆ ಕಾಲರಾ ಕಾಣಿಸಿಕೊಂಡಿರುವ ಮಾಹಿತಿ ಹೊರಬಿದ್ದಿದ್ದು, ಮುಂದೆ ಶುದ್ಧ ಕುಡಿಯುವ ನೀರಿನ ಅಭಾವದಿಂದ ಮತ್ತಷ್ಟು ರೋಗ-ರುಜಿನಗಳು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ ಎಂದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೊಡಗಿನಲ್ಲಿನ ಮಳೆ ಆಧಾರಿತ ಸಂಕಷ್ಠ ಸೂತ್ರ ರಚಿಸದಿದ್ದರೆ ಮುಂದೆ ರಾಜ್ಯಕ್ಕೆ ಒಂದು ಟಿಎಂಸಿ ನೀರನ್ನು ಉಳಿಸಿಕೊಳ್ಳುವುದು ಕಷ್ಟವಾಗಿದ್ದು ಜಲಾಶಯವೇ ನಮಗೆ ಸೇರಿದೆ ಎಂಬ ನಿಟ್ಟಿನಲ್ಲಿ ಹಕ್ಕು ಸಾಧಿಸಿದರೂ ಅಚ್ಚರಿ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹಾಕಿ ವಕೀಲರು ಹಾಗೂ ಅಧಿಕಾರಿಗಳ ತಂಡದಿಂದ ರಾಜ್ಯದ ನೀರಿನ ಸಮಸ್ಯೆ ಕುರಿತು ಸಮಗ್ರ ವರದಿಯನ್ನು ಪ್ರಾಧಿಕಾರ ಮತ್ತು ಸುಪ್ರಿಂ ಕೋರ್ಟ್ಗೆ ಸಲ್ಲಿಸಲು ಮುಂದಾಗಬೇಕು ಎಂದು ರಮೇಶ್ಗೌಡ ಒತ್ತಾಹಿಸಿದರು.
ಸಾಕ್ಷರ ಕೋಗಿಲೆ ಚೌಪು ಸ್ವಾಮಿಅವರು ನಾಡ ಪ್ರೇಮ ಕ್ರಾಂತಿ ಗೀತೆ ಹಾಡಿ ಕಾವೇರಿ ನಮ್ಮ ನಾಡಿನ ನೈಸರ್ಗಿಕ ಸಂಪನ್ಮೂಲವಾಗಿದ್ದು, ನಮಗೆ ಮೊದಲ ಆಧ್ಯತೆ ನೀಡಬೇಕು, ನಮ್ಮ ಜನತೆಗೆ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆ ಕಟ್ಟುವಂತೆ ಆಗ್ರಹಿಸಿ ರಮೇಶ್ಗೌಡರು ನಡೆಸುತ್ತಿರುವ ನಿಸ್ವಾರ್ಥ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಸದಾ ಇರುತ್ತದೆ ಎಂದರು. ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ಬೆಳಕು ಶ್ರೀಧರ್, ರಂಜಿತ್ಗೌಡ, ಪುಟ್ಟಪ್ಪಾಜಿ, ರಾಮಕೃಷ್ಣಪ್ಪ, ಚಿಕ್ಕಣ್ಣಪ್ಪ, ಸಿದ್ದಪ್ಪಾಜಿ, ಜಯರಾಮು, ರಾಜು, ಆರ್. ಶಂಕರ್, ಕೃಷ್ಣಪ್ಪ ಇತರರು ಇದ್ದರು.