ಮೈಸೂರು: ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಡಬ್ಬಲ್ ಗ್ಯಾರಂಟಿ ಯೋಜನೆಗಳು ದೊರಕಲಿವೆ. ಆದ್ದರಿಂದ ವಚನಭ್ರಷ್ಟ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ರವರನ್ನು ಆಯ್ಕೆ ಮಾಡಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ವರುಣಾ ಕ್ಷೇತ್ರದ ಮೊಸಂಬಾಯನಹಳ್ಳಿ, ದೇವಲಾಪುರ, ವರುಣಾ ಗ್ರಾಮಗಳಲ್ಲಿ ಶುಕ್ರವಾರ ನಡೆದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ಬೋಸ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನುಡಿದಂತೆ ನಡೆಯದೆ ವಚನಭ್ರಷ್ಟ ಸರ್ಕಾರವಾಗಿದ್ದು, ಭಾರತದ ಇತಿಹಾಸದಲ್ಲಿಯೇ ನುಡಿದಂತೆ ನಡೆದು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ೫ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪ್ರತಿಯೊಬ್ಬರು ಬೆಂಬಲಿಸಬೇಕು. ನಿಮ್ಮ ಮತ ದೇಶದ ಭವಿಷ್ಯವನ್ನು ರೂಪಿಸುವ ಮತವಾಗಿದ್ದು, ಮೋದಿ ಮುಖ ನೋಡಿ ಓಟು ಹಾಕಿದರೆ ನಿಮ್ಮ ಹೊಟ್ಟೆ ತುಂಬುತ್ತದೆಯೇ? ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆಯೇ ಯೋಚನೆ ಮಾಡಿ. ನಿಮ್ಮ ಅಭಿವೃದ್ಧಿಗೆ ಯಾರು ಬದ್ಧರಾಗಿದ್ದಾರೆ ಅವರಿಗೆ ಮತ ನೀಡಿ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನಿಮ್ಮ ಹಣವನ್ನು ನಿಮ್ಮ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿದೆ.
ಬಡತನ ನಿರ್ಮೂಲನೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ಸಹಾಯಧನ ನೀಡಲಾಗುವುದು, ರೈತರ ಸಾಲ ಮನ್ನಾ ಮಾಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ಗೆ ಮತವನ್ನು ಚಲಾಯಿಸುವ ಮೂಲಕ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಾ.ಪಂ. ಮಾಜಿ ಸದಸ್ಯರಾದ ಶಾಂತಮ್ಮ ಗುರುಸ್ವಾಮಿ, ಮಹದೇವಮ್ಮ, ನಂಜನಗೂಡು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ದಕ್ಷಿಣಾಮೂರ್ತಿ, ಮಾಕನಹುಂಡಿ ಶಿವು, ರಾಯನಹುಂಡಿ ರವಿ, ಮಹೇಶ್, ಶಿವಸ್ವಾಮಿ, ವಾಸುದೇವ, ಜಂತಗಳ್ಳಿ ಜಗದೀಶ್, ಕುಂಬ್ರಳ್ಳಿಮಠ ಮಹದೇವು, ಜಲಜಾಕ್ಷಿ, ಪಾಲಾಕ್ಷ, ಎಲ್. ಮಹೇಶ, ರಾಜಣ್ಣ, ಕನಕಮೂರ್ತಿ, ಶಿವಸ್ವಾಮಿ,ಮಂಜಪ್ಪ, ಪೂರ್ಣಚಂದ್ರ, ಛಾಯ, ಚನ್ನಾಜಮ್ಮ ಹಾಜರಿದ್ದರು.