ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರೇ ಅಲ್ಲ. ಅವರು ಯಾವಾಗ ಒಕ್ಕಲಿಗ ನಾಯಕರಾಗಿದ್ದರು. ಒಕ್ಕಲಿಗ ಸಮುದಾಯಕ್ಕೆ ಅವರ ಕೊಡುಗೆ ಏನು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನಿಸಿದರು.
ಅವರು ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಸಮೀಪದ ಗಡಿ ಗ್ರಾಮ ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್,ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರದ ವೇಳೆ ಒಕ್ಕಲಿಗ ಯುವಕರಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕನಕಪುರ ಹೊರತುಪಡಿಸಿದರೆ ಬೇರೆಲ್ಲೂ ಅವರು ನಾಯಕರಲ್ಲ. ಕಾಂಗ್ರೆಸ್ನಲ್ಲಿ ಒಕ್ಕಲಿಗ ನಾಯಕರೇ ಇಲ್ಲ, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ನಾಯಕರಿದ್ದಾರೆ ಎಂದರು.
ನಮ್ಮ ನಾಯಕರಾದ ಎಚ್.ಡಿ.ದೇವೇಗೌಡರು ಪ್ರಧಾನಿಗಳಾಗಿದ್ದರು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ನಾವು ಸೀನಿಯರ್ಸ್, ನೀವು ಜೂನಿಯರ್’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನವರು ಜಾತಿಗಣತಿ ನಡೆಸಲು ಅವಕಾಶ ನೀಡಿ, ಅದರಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಆರನೇ ಸ್ಥಾನಕ್ಕೆ ಇಳಿಸಲಾಗಿದೆ. ಆ ಮಾಹಿತಿ ಸೋರಿಕೆ ಮಾಡಿದ್ದು ಯಾರು ಎಂಬುದು ಗೊತ್ತಿದೆ. ಜಾತಿಗಣತಿ ವಿಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಶಿವಕುಮಾರ್ ಏನು ಮಾಡಿದ್ದಾರೆ? ಸಚಿವ ಸಂಪುಟದಲ್ಲಿ ಪ್ರಸ್ತಾಪ ಆದಾಗ ಒಕ್ಕಲಿಗ ಸಮುದಾಯದ ಬಗ್ಗೆ ಗೌರವ ಇದ್ದಿದ್ದರೆ ಶಿವಕುಮಾರ್ ರಾಜೀನಾಮೆ ನೀಡಬೇಕಿತ್ತು. ಸಂಪುಟದಲ್ಲಿ ಬಾಯಿ ಬಿಡದ ಇವರು ಒಕ್ಕಲಿಗ ನಾಯಕ ಹೇಗಾಗುತ್ತಾರೆ?’ ಎಂದು ಪ್ರಶ್ನೆ ಮಾಡಿದ ಸಾ.ರಾ.ಮಹೇಶ್ ಅವರು ರಾಜ್ಯದಲ್ಲಿ ಅಂದಿನಿಂದ ಇಂದಿನ ವರೆವಿಗೂ ದೇವೇಗೌಡರು ಹಾಗೂ ಕುಮಾರಣ್ಣ ಅವರೇ ಒಕ್ಕಲಿಗ ನಾಯಕರು ಎಂದು ಹೇಳಿದರು.
ಮೊದಲಿಗೆ ಬಟಿಗನಹಳ್ಳಿ, ಭೇರ್ಯ, ಸಂಬ್ರವಳ್ಳಿ, ಅರಕೆರೆ, ಗುಳುವಿನ ಅತ್ತಿಗುಪ್ಪೆ, ಮುಂಜನಹಳ್ಳಿ, ಚಿಕ್ಕಭೇರ್ಯ, ಕಾ.ಹೊಸೂರು, ಮುದುಗುಪ್ಪೆ, ಕುಪ್ಲಳ್ಳಿ, ತಂದ್ರೆ, ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ನ ಅಚ್ಚುಮೆಚ್ಚಿನ ನಾಯಕ ಕುಮಾರಣ್ಣ ಅವರನ್ನು ಶತಾಯಗತಾಯ ಗೆಲ್ಲಿಸಿ ಕೊಳ್ಳಲು ಸಾರಾ.ಮಹೇಶ್ ಇಂದು ಒಕ್ಕಲಿಗ ಜನಾಂಗ ಇರುವ ಗ್ರಾಮದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈ ಗೊಂಡರು. ಇವರಿಗೆ ಜಿಲ್ಲಾ ಬಿಜಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮತ್ತು ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್ ಸಾಥ್ ನೀಡಿದರು.