ಮಂಡ್ಯ :- ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಸಪೋರ್ಟ್ ಮಾಡ್ತಿಲ್ಲ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ದೇವೇಗೌಡ್ರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.
ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಗ್ರಾಮದಲ್ಲಿ ಶುಕ್ರವಾರ ಮತದಾನದ ಪ್ರಕ್ರಿಯೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ್ರು ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡ್ರಿಗೆ ಮಾಹಿತಿ ಕೊರತೆ ಆಗಿರಬೇಕು ಅನಿಸುತ್ತೆ. ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿ ನಾಯಕರು, ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡ್ತಿದ್ದಾರೆ ಯಾರು ಸಹ ವಿರೋಧ ಮಾಡಿಲ್ಲ ಎಲ್ಲರೂ ನನಗೆ ಸಹಾಯ ಮಾಡ್ತಿದ್ದಾರೆ ಎಂದರು.
ಕುಮಾರಸ್ವಾಮಿ ಪರ ಪ್ರಚಾರಕ್ಕೆ ಯಾರು ನನ್ನ ಕರೆಯಲಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವ್ರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ ಇದಕ್ಕಿಂತ ಇನ್ನೇನು ಮಾಡಬೇಕು. ನನಗೆ ಅಂಬರೀಶ್ ಅಭಿಮಾನಿಗಳು ಸಹ ನನಗೆ ಸಹಾಯ ಮಾಡಿದ್ದಾರೆ. ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನು ಎರಡು ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ. ಆದರೆ, ಅವರು ಪ್ರಚಾರಕ್ಕೆ ಯಾಕೇ ಬರಲಿಲ್ಲ ಅಂತ ನನಗೆ ಗೊತ್ತಿಲ್ಲ. ಇವತ್ತು ಬೆಂಗಳೂರಿನಿಂದ ಬಂದು ಸುಮಲತಾ ಅವರು ನನಗೆ ಮತ ಹಾಕಿದ್ದಾರೆ. ಹೀಗಾಗಿ ನಾನು ರಾಜ್ಯದಲ್ಲೆ ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.