ಅಥಣಿ :ಮಾಜಿ ಶಾಸಕ ಮಹೇಶ್ ಕುಮಟಳ್ಳಿಯವರು ಪ್ರತಿ ದಿನ ೭ ತಾಸ್ ಕರೆಂಟ್ ಬಿಡುವಂತೆ ಕೇಳುತ್ತಿದ್ದು, ಅಲ್ಲಲ್ಲಿ ಅಪಪ್ರಚಾರ ನಡೆಸಿದ್ದಾರೆ. ಅವರ ಮನವೊಲಿಸಿ ಕೃಷ್ಣಾ ನದಿಗೆ ನೀರು ತರಲಿ, ನೀರು ಬಂದ ಮರುದಿನವೇ ನಾನು ಪ್ರತಿದಿನ ೭ ಗಂಟೆ ವಿದ್ಯುತ್ ಪೂರೈಕೆ ಮಾಡಲು ಸಿದ್ಧರಿದ್ದೇವೆ ಎಂದು ಶಾಸಕ ಲಕ್ಷ್ಮಣ ಸವದಿ ಸವಾಲು ಹಾಕಿದರು.
ನಿಮ್ಮಲ್ಲಿ ಆ ಸಾಮರ್ಥ್ಯವಿದ್ದರೇ ಕ್ಷೇತ್ರದ ಜನತೆಗೆ ನೀರು ಕೊಡುವ ನಿಟ್ಟಿನಲ್ಲಿ ನೀವು ಕೇಂದ್ರ ಸರ್ಕಾರದ ಮತ್ತು ಮಹಾರಾಷ್ಟ್ರ ಸರ್ಕಾರದ ಮನವೊಲಿಸಿ ಕೃಷ್ಣಾ ನದಿಗೆ ನೀರು ಬಿಡಿಸಿದರೇ ನಾಳೆಯಿಂದಲೇ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗಿಲ್ಲ, ಎಲ್ಲರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೇಸಿಗೆ ಸಮಯದಲ್ಲಿ ಇನ್ನಷ್ಟು ದಿನ ನೀರು ಸಂಗ್ರಹವಿದ್ದರೇ ತಾಲೂಕಿನ ಜನತೆಗೆ ಅನುಕೂಲವಾಗುತ್ತದೆಂಬ ಉದ್ದೇಶದಿಂದ ನದಿ ಪಾತ್ರದ ಗ್ರಾಮಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ತಿಳಿಸಿದರು.