ಚನ್ನಪಟ್ಟಣ: ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡು ಅದನ್ನು ಚಿತ್ರೀಕರಣ ಮಾಡಿಕೊಂಡಿರುವ ಪೆನ್ಡ್ರೈವ್ ಇಂದು ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿದ್ದು ಅವರು ಯಾವುದೇ ದೇಶದಲ್ಲಿದ್ದರು ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಸಂತ್ರಸ್ಥೆಯರಿಗೆ ಈ ಪ್ರಕರಣದಿಂದ ದೊಡ್ಡ ಆಘಾತವಾಗಿದ್ದು ಸರ್ಕಾರವು ಈ ಸಂತ್ರಸ್ಥೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು, ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ನೈತಿಕ ಬಲ ತುಂಬಬೇಕಿದೆ ಎಂದು ರಮೇಶ್ಗೌಡ ಒತ್ತಾಯಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ನೂರು ಮಹನೀಯರಲ್ಲಿ ಒಬ್ಬರಾಗಿದ್ದಾರೆ. ರೈತಾಪಿ ವರ್ಗದಲ್ಲಿ ಹುಟ್ಟಿ ಗುತ್ತಿಗೆದಾರರಾಗಿ, ರಾಜಕಾರಣಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ರಾಜ್ಯ ಮತ್ತು ದೇಶದ ನೀರಾವರಿ ಯೋಜನೆಗಳಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ನಾಯಕರ ಮೊಮ್ಮಗ ಇಂದು ರಾಜ್ಯವೇ ತಲೆತಗ್ಗಿಸುವಂತೆ ದೊಡ್ಡ ಕರ್ಮಕಾಂಡದಲ್ಲಿ ಸಿಲುಕಿರುವುದು ಖಂಡನೀಯವಾಗಿದೆ. ಆದರೆ ಈ ಪ್ರಕರಣದಲ್ಲಿ ದೇವೇಗೌಡರಿಗೆ ಅಪಮಾನ ಮಾಡುವಂತೆ ಅವರ ಹೆಸರನ್ನು ಬಳಕೆ ಮಾಡುವುದು ಸರಿಯಲ್ಲ. ದೇವೇಗೌಡರು ಎಂದೂ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡವರಲ್ಲ ಎಂದು ರಮೇಶ್ಗೌಡರು ಅಭಿಪ್ರಾಯಿಸಿದರು.