ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರ ನಾಮಪತ್ರ ತಿರಸ್ಕೃತವಾಗಿದೆ.
ನಾಮಪತ್ರಕ್ಕೆ ಅಗತ್ಯವಿದ್ದ ಅಫಿಡವಿಟ್ ಸಲ್ಲಿಸಲು ರಂಗೀಲಾ ವಿಫಲರಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ.೧೪ರಂದು ಶ್ಯಾಮ್ ರಂಗೀಲಾ ಅವರು ನಾಮಪತ್ರ ಸಲ್ಲಿಸಿದ್ದರು. ಮೊದಲು ಮೇ.೧೦ಕ್ಕೆ ಅವರಿಗೆ ನಾಮಪತ್ರ ಸಲ್ಲಿಸಲು ಅಗತ್ಯವಿದ್ದ ಅರ್ಜಿಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದರು, ಬಳಿಕ ನಾಮಪತ್ರ ಸಲ್ಲಿಸಲು ಅವಕಾಶವೇ ಸಿಗುತ್ತಿಲ್ಲ ಎಂದು ಮೇ.೧೩ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ನನ್ನ ದಾಖಲೆಗಳಲ್ಲಿ ಸ್ವಲ್ಪ ಸಮಸ್ಯೆಯಿದೆ ಎಂದು ಇಂದು ಜಿಲ್ಲಾಧಿಕಾರಿಗಳು ನನಗೆ ತಿಳಿಸಿದರು ಹಾಗೂ ನಾನು ಪ್ರಮಾಣ ವಚನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ನನ್ನೊಂದಿಗೆ ವಕೀಲರು ಬರಲು ಅವಕಾಶ ನೀಡಲಿಲ್ಲ ಹಾಗೂ ನನ್ನೊಬ್ಬನನ್ನೇ ಕರೆಸಿಕೊಂಡರು. ನನ್ನ ಸ್ನೇಹಿತನನ್ನು ಥಳಿಸಲಾಯಿತು. ಮೋದಿಯವರು ನಟಿಸಬಹುದು ಮತ್ತು ಅಳಬಹುದು. ಆದರೆ, ನಾನಿಲ್ಲಿ ಅಳಲು ಬಯಸುವುದಿಲ್ಲ ಎಂದು ರಂಗೀಲಾ ಹೇಳಿಕೊಂಡಿದ್ದಾರೆ.
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ವಾರಣಾಸಿ ಜಿಲ್ಲಾಧಿಕಾರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯು, ಶ್ಯಾಮ್ ರಂಗೀಲಾರ ನಾಮಪತ್ರದಲ್ಲಿ ದೋಷವಿತ್ತು ಹಾಗೂ ಔಪಚಾರಿಕ ಕಾರ್ಯವಿಧಾನಗಳಿಗೆ ಅನುಗುಣವಾಗಿರಲಿಲ್ಲ ಎಂದು ಚುನಾವಣಾ ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡಿದೆ.