ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ಹೊಸಪೇಟೆಯಲ್ಲಿ ಮೋಜು ಮಾಡುತ್ತಿದೆ. ಎರಡು ವರ್ಷ ಪೂರ್ಣಗೊಳಿಸಿದ್ದನ್ನು ತಿಳಿಸಿ ಮೋಜು ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಬಿಜೆಪಿ ನಿಯೋಗವು ಇಂದು ಸಿಲ್ಕ್ ಬೋರ್ಡಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿತ್ತು. ಮಳೆ ಹಾನಿಗೆ ಕಾರಣಗಳು, ಆಗಿರುವ ಹಾನಿ ಕುರಿತು ನಿಯೋಗವು ಪರಿಶೀಲಿಸಿತು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಕಡೆ ಮುಖ್ಯಮಂತ್ರಿಗಳು ಗಮನ ಕೊಡಬೇಕು. ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರಕಾರವು ಒಂದು ಅಯೋಗ್ಯ ಸರಕಾರ ಎಂದು ಅವರು ಆರೋಪಿಸಿದರು. ಈ ಸರಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಟೀಕಿಸಿದರು.
ಕೆಲವೇ ಕೆಲವು ಗಂಟೆ ಮಳೆ ಬಂದ ಸಂದರ್ಭದಲ್ಲಿ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರು ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ.. ಎಂದರಲ್ಲದೆ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಸಾವಿರಾರು ಕೋಟಿ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿತ್ತು. ಆ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಇವತ್ತು ಕೆಲಸ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೇ ನಿಂತಿವೆ ಎಂದು ಗಮನ ಸೆಳೆದರು.
ಡಿ.ಕೆ.ಶಿವಕುಮಾರ್ ಅವರು ಟಾಲೆಸ್ಟ್ ಟವರ್, ಸುರಂಗ ರಸ್ತೆ ಕುರಿತು ಮಾತನಾಡುತ್ತಾರೆ. ಬೆಂಗಳೂರಿನ ಮಹಾಜನತೆ, ಜನಸಾಮಾನ್ಯರು ಇವುಗಳನ್ನು ಕೇಳುತ್ತಿಲ್ಲ. ಬಂದ ಮಳೆಯ ನೀರು ಸರಿಯಾಗಿ ಹೋಗುವ ವ್ಯವಸ್ಥೆ ಆಗಬೇಕು. ರಾಜಕಾಲುವೆಯನ್ನು ಸರಿಪಡಿಸಬೇಕು. ಕೆರೆಗಳ ಒತ್ತುವರಿ ಸರಿಪಡಿಸಲು ಬಯಸುತ್ತಾರೆ ಎಂದು ತಿಳಿಸಿದರು.