ಬೆಂಗಳೂರು: ಕನ್ನಡದ ಹಿರಿಯ ಕತೆಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಬಾನು ಮುಷ್ತಾಕ್ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೃತಿಯಾದ ʼಹಾರ್ಟ್ ಲ್ಯಾಂಪ್” (ಅನುವಾದಕಿ- ದೀಪಾ ಬಸ್ತಿ) ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ (International Booker Prize) ಲಭಿಸಿದೆ. ಈ ಪ್ರಶಸ್ತಿಯ ಮೊತ್ತ ಐವತ್ತು ಸಾವಿರ ಪೌಂಡುಗಳಾಗಿದ್ದು (57,42,000ರೂಪಾಯಿ) ಈ ಪ್ರಶಸ್ತಿ ಮೊತ್ತವನ್ನು ಮೂಲ ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಬಸ್ತಿ ಸಮನಾಗಿ ಹಂಚಿಕೊಳ್ಳುವರು.
ಬಾನು ಮುಷ್ತಾಕ್ ಅವರು ಕಳೆದ ನಾಲ್ಕು ದಶಕಗಳಿಂದಲೂ ಬರೆಹದ ಬೇಸಾಯ ಕೈಗೊಂಡಿದ್ದು ಇದುವರೆಗೆ ಅವರ ಹಲವು ಕಥಾ ಸಂಕಲನಗಳು ಪ್ರಕಟವಾಗಿವೆ. ʼಹೆಜ್ಜೆ ಮೂಡಿದ ಹಾದಿʼ, ʼಬೆಂಕಿ ಮಳೆʼ, ʼಎದೆಯ ಹಣತೆ, ಸಫೀರಾʼ, ʼಬಡವರ ಮಗಳು ಹೆಣ್ಣಲ್ಲʼ ಅವರ ಕಥಾ ಸಂಕಲನಗಳಾಗಿದ್ದು “ಹಸೀನಾ ಮತ್ತು ಇತರ ಕತೆಗಳು” ಅವರ ಸಮಗ್ರ ಕಥಾ ಸಂಕಲವಾಗಿದೆ. ಇದನ್ನು ಅಭಿರುಚಿ ಪ್ರಕಾಶನ ಪ್ರಕಟಿಸಿದೆ. 1990 ರಿಂದ 2023ರ ವರೆಗೆ ಪ್ರಕಟವಾಗಿರುವ ಬಾನು ಮುಷ್ತಾಕ್ ಅವರ ಆರು ಕತಾ ಸಂಕಲನಗಳಿಂದ ಆಯ್ದ 11 ಕತೆಗಳನ್ನು ಅವರ ಹಾರ್ಟ್ ಲ್ಯಾಂಪ್ ಕೃತಿ ಒಒಳಗೊಂಡಿದೆ. ಈಗ ಈ ಕೃತಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.
ಈ ಮೂಲಕ ಕನ್ನಡದ ಕೃತಿಯೊಂದಕ್ಕೆ ಲಭಿಸಿರುವ ಚೊಚ್ಚಲ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಇದಾಗಿದೆ. ಈ ಹಿಂದೆ ಕೆಲವಾರು ಭಾರತೀಯ ಲೇಖಕ ಲೇಖಕಿಯರು ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಲ್ಲಿ ಲೇಖಕಿ ಅರುಂಧತಿ ರಾಯ್ (God of the Small things, 1997 ), ಕಿರಣ್ ದೇಸಾಯಿ (The Inheritance of Loss, 2006), ಅರವಿಂದ್ ಆಡಿಗ (The White Tiger, 2008), ಭಾರತೀಯ ಟ್ರಿನಿಡಾಡ್ ಬ್ರಿಟಿಷ್ ಲೇಖಕ ವಿ ಎಸ್ ನೈಪೌಲ್ (n a Free State, 1971), ಭಾರತೀಯ ಮೂಲಕದ ಬ್ರಿಟಿಷ್ ಅಮೆರಿಕನ್ ಕಾದಂಬರಿಕಾರ ಸಲ್ಮಾನ್ ರಷ್ದೀ (Midnight’s Children, 1981), ಅನುವಾದಗೊಂಡ ಕೃತಿಗಳಿಗೆ ಸಂದಿರುವ ಪ್ರಶಸ್ತಿಗಳಲ್ಲಿ 2022ರಲ್ಲಿ ಹಿಂದಿ ಲೇಖಕಿ ಗೀತಾಂಜಲಿ ಶ್ರೀಯವರಿಗೆ ಅವರ ರೇತ್ ಸಮಾಧಿ (Tomb of sand) ಕೃತಿಗೆ ಬೂಕರ್ ದೊರೆದಿತ್ತು. ನಂತರದಲ್ಲಿ ಕನ್ನಡದ ಲೇಖಕಿಯಾಗಿ ಬಾನು ಮುಷ್ತಾಕ್ ಈ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಕನ್ನಡಿಗರೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.