ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ಏರ್ಪಟ್ಟಿದ್ದು, ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ” ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೇ 29ರಿಂದ ಶಾಲೆಗಳು ಪ್ರಾರಂಭವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮಾರ್ಗಸೂಚಿ ಶಾಲೆಗಳಿಗೆ ಕೊಡೋದಿಲ್ಲ. ಆದರೆ ಎಚ್ಚರಿಕೆ, ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ. “ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನ ನೀಡಿದರೆ ಅದನ್ನ ಅನುಷ್ಠಾನಕ್ಕೆ ತರುತ್ತೇವೆ. ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ ಕೊಡುವ ಮಾರ್ಗಸೂಚಿಯನ್ನೂ ನಾವು ಜಾರಿ ಮಾಡುತ್ತೇವೆ. ಇಲ್ಲಿವರೆಗೆ ಆರೋಗ್ಯ ಇಲಾಖೆ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ” ಎಂದು ತಿಳಿಸಿದ್ದಾರೆ.
ಸಿಎಂ ನಿರ್ದೇಶನ ಪಾಲಿಸುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಹಾಕೋದು ಒಳ್ಳೆಯದು. ಆರೋಗ್ಯದಲ್ಲಿ ವ್ಯತ್ಯಾಸ ಇರೋ ಮಕ್ಕಳು ಶಾಲೆಗೆ ಬರೋದು ಬೇಡ ಎಂದು ಸೋಮವಾರ ನಡೆದ ಸಿಎಂ ಸಭೆಯಲ್ಲಿ ನಿರ್ಧಾರವಾಗಿದೆ. ಶಿಕ್ಷಕರು, ಮಕ್ಕಳು, ಪೋಷಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು” ಎಂದಿದ್ದಾರೆ.