Friday, June 6, 2025
Google search engine

Homeರಾಜ್ಯವಾಹನ ತಪಾಸಣೆಯ ವೇಳೆ ಸುರಕ್ಷತೆ ಬಗ್ಗೆ ಡಿಜಿ‌ & ಐಜಿಪಿ ಡಾ. ಎಂ.ಎ. ಸಲೀಂ ಕಡ್ಡಾಯ...

ವಾಹನ ತಪಾಸಣೆಯ ವೇಳೆ ಸುರಕ್ಷತೆ ಬಗ್ಗೆ ಡಿಜಿ‌ & ಐಜಿಪಿ ಡಾ. ಎಂ.ಎ. ಸಲೀಂ ಕಡ್ಡಾಯ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಸಾರ್ವಜನಿಕರ ಜೀವ ರಕ್ಷಣೆ ಮತ್ತು ಪೊಲೀಸ್ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ, ವಾಹನ ತಪಾಸಣೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಘಟಕಗಳಿಗೆ ನವೀಕರಿತ ಸುತ್ತೋಲೆ ಹೊರಡಿಸಿದ್ದಾರೆ.

ಈ ಕ್ರಮಕ್ಕೆ ಹಿನ್ನೆಲೆ ನೀಡಿರುವ ಘಟನೆಗಳು ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಂಭವಿಸಿದ್ದು, ತಪಾಸಣೆಯ ವೇಳೆ ಸರಿಯಾದ ಮುನ್ನೆಚ್ಚರಿಕೆ ಇಲ್ಲದೆ ಸಂಭವಿಸಿದ ಅಪಘಾತಗಳಲ್ಲಿ ಮಗು ಹಾಗೂ ಪೊಲೀಸ್ ಸಿಬ್ಬಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಈ ಪ್ರಕರಣಗಳನ್ನು ಗಮನಿಸಿದಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲಿಸುವಾಗ ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು / ಮುಂಜಾಗ್ರತಾ ಕ್ರಮಗಳನ್ನು /ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಳ್ಳದಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರ /ಅಮಾಯಕರ ಜೀವಕ್ಕೆ ಹಾಗೂ ಪೊಲೀಸರೇ ತಮ್ಮ ಜೀವಕ್ಕೂ ಕುತ್ತು ತಂದುಕೊಳ್ಳುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.

ಸುತ್ತೋಲೆಯ ಪ್ರಮುಖ ಸೂಚನೆಗಳು:

  1. ತಪಾಸಣೆಗೆ ಮುನ್ನ ಮುನ್ನೆಚ್ಚರಿಕೆ:
    ವಾಹನ ತಪಾಸಣೆ ಮಾಡುವ ಸ್ಥಳದಲ್ಲಿ 100-150 ಮೀಟರ್ ಅಂತರದಲ್ಲಿ ರಿಫೆಕ್ಟಿವ್ ಕೋನ್‌ಗಳು ಹಾಗೂ ಇತರ ಸುರಕ್ಷತಾ ಸಲಕರಣೆಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. Zig-zag ಮಾದರಿಯಲ್ಲಿ ಬ್ಯಾರಿಕೇಡ್ ಹಾಕುವುದು ನಿಷಿದ್ಧ.
  2. ಅಧಿಕಾರಿಗಳ ಪಾತ್ರ:
    ಎಲ್ಲ ಘಟಕಾಧಿಕಾರಿಗಳು ತಮ್ಮ ಅಧೀನದ ಸಿಬ್ಬಂದಿಗೆ ಈ ಮಾರ್ಗಸೂಚಿಯನ್ನು ತಿಳಿಸಿ, ನಿಷ್ಕಳಂಕವಾಗಿ ಅನುಸರಿಸಲು ನಿರ್ದೇಶನ ನೀಡಬೇಕು.
  3. ಸಾಕ್ಷ್ಯಾಧಾರವಿಲ್ಲದ ತಪಾಸಣೆಗೆ ನಿರ್ಬಂಧ:
    ಕೇವಲ ದೃಶ್ಯ ಪ್ರಮಾಣವಿರುವ ಉಲ್ಲಂಘನೆಗಳು ಕಂಡುಬಂದಾಗ ಮಾತ್ರ ವಾಹನ ತಪಾಸಣೆ ಮಾಡಬೇಕು. ಪಿಲ್ಲಿಯನ್ ರೈಡರ್‌ರನ್ನು ಎಳೆಯುವುದು ಅಥವಾ ವಾಹನದ ಕೀಲಿಕೈ ತೆಗೆದುಕೊಳ್ಳುವುದು ನಿಷೇಧ.
  4. ಅಪಘಾತದ ಅಪಾಯವಿಲ್ಲದ ತಡೆ ವಿಧಾನ:
    ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನಟ್ಟುವ ಬದಲು, ನೋಂದಣಿ ಸಂಖ್ಯೆ ದಾಖಲಿಸಿ ನಿಯಂತ್ರಣ ಕೋಣೆಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕು.
  5. ಸಿಬ್ಬಂದಿಯ ಸುರಕ್ಷತೆ:
    ಬಾಡಿ ಕ್ಯಾಮೆರಾ, ರಿಫೆಕ್ಟಿವ್ ಜಾಕೆಟ್ ಹಾಗೂ ಲೆಡ್ ಬ್ಯಾಟನ್ ಗಳ ಧರಣೆ ಕಡ್ಡಾಯ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ವಿಶೇಷ ಮುನ್ನೆಚ್ಚರಿಕೆ ಅಗತ್ಯ.
  6. ಸಂಪರ್ಕರಹಿತ ಪ್ರವರ್ತನೆ:
    ITMS ಅಥವಾ TMC ಇರುವ ಘಟಕಗಳಲ್ಲಿ ಕಾನೂನು ಉಲ್ಲಂಘನೆಗಳ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಸಂಪರ್ಕರಹಿತ ಪ್ರವರ್ತನೆಯ ಮೂಲಕ (Contactless Enforcement) ನಡೆಸಬೇಕು.
  7. ಜಾಗೃತಿ ಅಭಿಯಾನ:
    ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ನಿತ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  8. ತಂತ್ರಜ್ಞಾನ ಆಧಾರಿತ ಕ್ರಮ:
    ಎಫ್‌ಟಿವಿಆರ್ (F.T.V.R) ಅಥವಾ ಇತರ ಡಿಜಿಟಲ್ ಸಾಧನಗಳ ಮೂಲಕ ಎಡವಟ್ಟಾದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅತಿ ವೇಗದ ವಾಹನಗಳನ್ನು ನೇರವಾಗಿ ತಡೆದು ಅಪಾಯಕ್ಕೆ ಎಳೆಯಬಾರದು.
  9. ನಾಕಾಬಂಧಿಗೆ ನಿರ್ಬಂಧ:
    ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಪಟ್ಟ ನಾಕಾಬಂಧಿ ಪ್ರಕ್ರಿಯೆಗಳನ್ನು ಹೆದ್ದಾರಿಗಳ ಬದಲು ಒಳ ರಸ್ತೆಗಳಲ್ಲಿಯೇ ನಡೆಸಬೇಕು. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ಬೆಂಬಲ ನೀಡಬೇಕು.
  10. ಸುತ್ತೋಲೆಯ ಕಡ್ಡಾಯ ಅನುಸರಣೆಗೆ ಸೂಚನೆ:
    ಎಲ್ಲಾ ಪೊಲೀಸ್ ಆಯುಕ್ತರುಗಳು ಹಾಗೂ ಪೊಲೀಸ್ ಅಧೀಕ್ಷಕರುಗಳು ಈ ವಿಷಯದ ಕುರಿತು ವೈಯಕ್ತಿಕ ಗಮನಹರಿಸಿ, ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ನೀಡುವಂತೆ‌ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular