ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಣಚೂರು ಮೆಡಿಕಲ್ ಕಾಲೇಜಿಗೆ ಜೂನ್ 4ರಂದು ಬಾಂಬ್ ಬೆದರಿಕೆ ಕರೆ ಬಂದು ಸಂಚಲನ ಮೂಡಿತ್ತು. ಬೆಳಗ್ಗೆ ಅನಾಮಧೇಯ ವ್ಯಕ್ತಿ ಫೋನ್ ಮಾಡಿ ಹನ್ನೊಂದು ಗಂಟೆಗೆ ಬಾಂಬ್ ಸ್ಫೋಟವಾಗಲಿದೆ ಎಂದು ಎಚ್ಚರಿಸಿದ್ದ. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಅದು ಹುಸಿ ಬೆದರಿಕೆ ಎಂದು ತಿಳಿದುಬಂತು.
ತನಿಖೆಯಲ್ಲಿ ಶಾಕ್ ವಿಷಯ ಬೆಳಕಿಗೆ ಬಂದಿದೆ . ಈ ಕರೆ ಕಾಲೇಜಿನ ಪಿ.ಜಿ. ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ನೀಡಿದ್ದಳೆಂದು ಪೊಲೀಸರು ಖಚಿತಪಡಿಸಿದ್ದಾರೆ. ಸೆಮಿನಾರ್ ತಪ್ಪಿಸಲು ಕರೆ ಮಾಡಿದುದಾಗಿ ಒಪ್ಪಿಕೊಂಡಿದ್ದಾಳೆ. ಅದೆ ದಿನವೇ ಸೆಮಿನಾರ್ ಇತ್ತು. ಉಳ್ಳಾಲ ಠಾಣೆ ಪೊಲೀಸರು ತಾಂತ್ರಿಕ ವಿಶ್ಲೇಷಣೆಯ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಘಟನೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.