ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಮಂಜೂರಾದ ಮನೆ ನಿವೇಶನ ವಿತರಿಸುವಂತೆ ಒತ್ತಾಯಿಸಿ ಕಳೆದ 11 ದಿನಗಳಿಂದ ಧರಣಿ ನಡೆಸಲಾಗುತ್ತಿದೆ.

ತುಳುನಾಡಿನ ಯುವಕರು ಹಿಂದು – ಮುಸ್ಲಿಂ ಎಂದು ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿದ್ದರೆ, ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಮಂಜೂರಾದ ಮನೆ ನಿವೇಶನ ವಿತರಿಸುವಂತೆ ಒತ್ತಾಯಿಸಿ ಕಳೆದ 11 ದಿನಗಳಿಂದ ಧರಣಿ ನಿರತರಾದ ಶ್ರಮಿಕ ಹೆಣ್ಣುಮಕ್ಕಳು ಈ “ಧರ್ಮ ಯುದ್ಧ”, ಹಿಂದು – ಮುಸ್ಲಿಂ ಗೊಡವೆ ಇಲ್ಲದೆ ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. “ನಮ್ಮದು ಶ್ರಮಿಕರ ಧರ್ಮ, ಬಡವರ ಧರ್ಮ” ಎಂಬ ಸಂದೇಶ ಹೊರಡಿಸುವಂತೆ ಧರಣಿ ಮಂಟಪದಲ್ಲೆ ಒಟ್ಟಾಗಿ ಹಿಂದು, ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಅನ್ನದ ಬಟ್ಟಲಾಗಿರುವ ಬೀಡಿ ಸುತ್ತುತ್ತಿದ್ದಾರೆ. ಒಂದೇ ಮಡಕೆಯಲ್ಲಿ ಗಂಜಿ ಬೇಯಿಸಿ ತಿನ್ನುತ್ತಿದ್ದಾರೆ.
ಸ್ಥಳೀಯ ಶಾಸಕರು 97 ಕುಟುಂಬಗಳಿಗೆ 7 ವರ್ಷಗಳ ಹಿಂದೆ ಹಕ್ಕು ಪತ್ರ ವಿತರಿಸಿ, ಈವರೆಗೂ ನಿವೇಶನ ಸ್ವಾಧೀನ ನೀಡದೆ ವಂಚಿಸಿರುವುದರ ವಿರುದ್ಧ ಗ್ರಾಮದ ನಿವೇಶನ ರಹಿತರು ನಡೆಸುತ್ತಿರುವ ಹಗಲು ರಾತ್ರಿ ಧರಣಿ 11ನೇ ದಿನಕ್ಕೆ ಪ್ರವೇಶಿಸಿದೆ. ಧರಣಿ ನಿರತರಲ್ಲಿ ಬಹುತೇಕರು ಬೀಡಿ ಕಾರ್ಮಿಕರಾಗಿದ್ದಾರೆ.