ಚಿಂತಾಮಣಿ: ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪತಿ ಪತ್ನಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಗತಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಚಂದ್ರಪ್ಪ ಬಿನ್ ನರಸಿಂಹಪ್ಪ(೫೨) ಪತ್ನಿ ಬೇಬಿಮ್ಮ(೪೫) ಎಂದು ಗುರುತಿಸಲಾಗಿದೆ. ಚಂದ್ರಪ್ಪ ಮತ್ತು ಪತ್ನಿ ರಾತ್ರಿ ಚಿಂತಾಮಣಿ ತಾಲ್ಲೂಕಿನ ಹಿರಣಪಲ್ಲಿ ಗ್ರಾಮದ ಮಗಳ ಮನೆಗೆ ಬಂದಿದ್ದು ಇಂದು ಬೆಳಗ್ಗೆ ಚಿಂತಾಮಣಿ ನಗರಕ್ಕೆ ಕೆಲಸದ ನಿಮಿತ್ತ ಬಂದು ಪತಿ-ಪತ್ನಿ ಇಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಮತ್ತೆ ಮಗಳ ಮನೆಗೆ ಹೋಗುತ್ತಿದ್ದ ವೇಳೆ ಮುರುಗಮಲ್ಲದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪತಿ ಮತ್ತು ಪತ್ನಿ ಇಬ್ಬರು ಮೃತಪಟ್ಟಿದ್ದಾರೆ.
ಘಟನೆಯ ವಿಷಯ ತಿಳಿದ ತಕ್ಷಣ ಅಡಿಷನಲ್ ಎಸ್ಪಿ ಜಗನ್ನಾಥ್ ರೈ, ಡಿವೈಎಸ್ಪಿ ಮುರಳಿಧರ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.