ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರಿ ಕಛೇರಿಗಳಿಗೆ ಸಾರ್ವಜನಿಕ ಕೆಲಸಗಳಿಗೆ ಬರುವ ನಾಗರೀಕರ ಜತೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ನಿಗದಿ ಅವಧಿಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಸೂಚಿಸಿದರು.
ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿಯಮಾನುಸಾರ ಕೆಲಸ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಅಂತಹಾ ದೂರುಗಳಿಗೆ ಹಿಂಬರಹವನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು. ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ಸರ್ಕಾರಿ ಕಛೇರಿಗಳಿಗೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಬರುವುದಿಲ್ಲ ಬಂದರೂ ಕೆಲವರು ಟೀ ಮತ್ತು ಕಾಫಿ ನೆಪ ಹೇಳಿಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಜನರಿಗೆ ಅನಾನುಕೂಲ ಮಾಡುತ್ತಿದ್ದಾರೆ ಎಂದು ವ್ಯಾಪಕ ದೂರುಗಳು ಕೇಳಿಬರುತ್ತಿದ್ದು ಇದು ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಕಛೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜತೆಗೆ ತಾಲೂಕು ಕೇಂದ್ರದಲ್ಲಿ ಅಹವಾಲು ಆಲಿಸಿದ ಸಮಯದಲ್ಲಿ ನೀಡಿದ ದೂರುಗಳನ್ನು ಜನರು ನೀಡಿದ ಅರ್ಜಿಗಳ ವಿಲೇವಾರಿಯ ಬಗ್ಗೆಯೂ ಪರಿಶೀಲನೆ ನಡೆಸಲಿದ್ದು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ನಿತ್ಯ ಕಛೇರಿಗೆ ಆಗಮಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾತಿಗೆ ಸಹಿ ಹಾಕುವುದರೊಂದಿಗೆ ಚಲನ ವಲನ ವಹಿ ದಾಖಲಿಸಿ ಸರ್ಕಾರದ ನಿರ್ದೇಶನದಂತೆ ಗುರುತಿನ ಚೀಟಿ ಧರಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಆದೇಶಿಸಿದ ಅವರು ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು. ಇಂದಿನ ಕುಂದುಕೊರತೆ ಸಭೆಯಲ್ಲಿ ನೀಡಿದ ಇಲಾಖೆಗಳ ವಿರುದ್ದ ೩೦ ದೂರುಗಳು ಬಂದಿದ್ದು ಆ ಪೈಕಿ ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ೨೧ ಮತ್ತು ಸಾಲಿಗ್ರಾಮ ತಾಲೂಕಿನ ೯ ದೂರುಗಳು ಬಂದಿದ್ದು ಕಳೆದ ಬಾರಿಗೆ ವೋಲಿಸಿದರೆ ಈ ಬಾರಿ ೧೧ ಹೆಚ್ಚುವರಿ ದೂರುಗಳು ಬಂದಿದ್ದು ಇದು ಅಧಿಕಾರಿಗಳ ಕಾರ್ಯ ಕ್ಷಮತೆಯನ್ನು ಪ್ರಶ್ನಿಸುವಂತಾಗಿದ್ದು ಭವಿಷ್ಯದಲ್ಲಿ ಇಂತಹ ದೂರು ಮತ್ತೆ ಬಾರದಂತೆ ನೋಡಿಕೊಳ್ಳಬೇಕುಎಂದು ಕಿವಿ ಮಾತು ಹೇಳಿದರು.
ಲೋಕಾಯುಕ್ತ ಡಿವೈಎಸ್ಪಿಗಳಾದ ಮ್ಯಾಥ್ಯೂಥಾಮಸ್, ವೆಂಕಟೇಶ್, ಇನ್ಸ್ಪೆಕ್ಟರ್ಗಳಾದ ರವಿಕುಮಾರ್, ಪಿ.ಉಮೇಶ್, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ. ಇಒ ವಿ.ಪಿ.ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ಪಿಎಸ್ಐ ಆರ್.ಸ್ವಾಮೀಗೌಡ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಶೀರಸ್ತೇದಾರ್ ಅಸ್ಲಂಬಾಷ, ಎಡಿಎಲ್ಆರ್ ಶ್ರೀಕಂಠಶರ್ಮ, ಜನಸಂಪನ್ಮೂಲ ಇಲಾಖೆಯಆಯಾಜ್ ಪಾಷಾ, ಆದರ್ಶ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ದೂರು ದಾರರು ಹಾಜರಿದ್ದರು.