ಬೆಂಗಳೂರು: ರಾಜ್ಯ ಸರ್ಕಾರ ಮೈಸೂರನ್ನು ಸುಸಜ್ಜಿತ ಸಾಂಸ್ಕೃತಿಕ ಹಾಗೂ ಆಧುನಿಕ ನಗರವನ್ನಾಗಿ ರೂಪಿಸಲು ‘ನವ ಮೈಸೂರು ನಿರ್ಮಾಣ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ತೀರ್ಮಾನಿಸಿದೆ. ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್, “ಮೈಸೂರು ರಾಜಧಾನಿ ಬೆಂಗಳೂರುಂತೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೈಗಾರಿಕೆ, ಐಟಿ-ಬಿಟಿ ಕ್ಷೇತ್ರಗಳು, ವಸತಿ ಯೋಜನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ನಗರ ಯೋಜನೆ ಅನಿವಾರ್ಯವಾಗಿದೆ,” ಎಂದು ತಿಳಿಸಿದರು.
‘ನವ ಮೈಸೂರು’ ಯೋಜನೆ ಐದು ಪ್ರಮುಖ ಆಧಾರಸ್ತಂಭಗಳ ಅಡಿಯಲ್ಲಿ ರೂಪಿಸಲಾಗಿದೆ: ಉದ್ಯಮ ಮೈಸೂರು, ನಿಪುಣ ಮೈಸೂರು, ಸುಖೀವಾಸ ಮೈಸೂರು, ಪ್ರವಾಸೋದ್ಯಮ ಮೈಸೂರು ಮತ್ತು ಸಂಚಾರ ಮೈಸೂರು. ಉದ್ಯಮ ಮೈಸೂರಿನಲ್ಲಿ ಆಧುನಿಕ ಉತ್ಪಾದನಾ ಹಬ್ ಸ್ಥಾಪನೆ, ನಿಪುಣ ಮೈಸೂರಿನಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು ಹಾಗೂ ಉದ್ಯಮಶೀಲತ್ವ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ.
ಸುಖೀವಾಸದಲ್ಲಿ ಟೆಕ್ ಸಿಟಿ ನಿರ್ಮಾಣ, ಪ್ರವಾಸೋದ್ಯಮದಲ್ಲಿ ಪುನಶ್ಚೇತನ ಹಾಗೂ ಕ್ಷೇಮ ಕೇಂದ್ರಗಳು ಸ್ಥಾಪನೆ, ಸಂಚಾರ ಮೈಸೂರಿನಲ್ಲಿ ರ್ಯಾಪಿಡ್ ಮೆಟ್ರೋ ಯೋಜನೆ ಜಾರಿಯಾಗಲಿದೆ.
ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಇದರಿಂದ ಸರಕಾರದ ಮೇಲೆ ಆರ್ಥಿಕ ಭಾರ ಇಳಿಯುತ್ತದೆ. ಮೈಸೂರು ಬೆಂಗಳೂರಿನ ನಂತರದ ಪ್ರಮುಖ ಬಂಡವಾಳ ಹೂಡಿಕೆ ತಾಣವಾಗಿದ್ದು, ಉದ್ಯಮಿಗಳಿಗೆ ಭೂಮಿ, ಮೂಲಸೌಕರ್ಯ ಹಾಗೂ ತ್ವರಿತ ಅನುಮತಿ ಸೌಲಭ್ಯಗಳನ್ನು ನೀಡಲು ರಾಜ್ಯ ಸರಕಾರ ಸಜ್ಜಾಗಿದೆ ಎಂದು ಸುರೇಶ್ ಹೇಳಿದರು.