ಚಿಕ್ಕಬಳ್ಳಾಪುರ: ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟ ಮುಂದಿನ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಮುಚ್ಚಲಾಗುತ್ತಿದೆ. ಜೂನ್ 19 ರಂದು ನಂದಿಗಿರಿಧಾಮದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿಯೇ ಈ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು, ಜೂನ್ 16ರ ಸಂಜೆ 5 ಗಂಟೆಯಿಂದ ಜೂನ್ 20ರ ಬೆಳಿಗ್ಗೆ 5 ಗಂಟೆವರೆಗೆ ನಂದಿಬೆಟ್ಟ ಪ್ರವೇಶವನ್ನು ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಜೊತೆಗೆ, ನಂದಿಗಿರಿಧಾಮದ ಮೇಲ್ಭಾಗದಲ್ಲಿರುವ ಎಲ್ಲಾ ವಸತಿ ಗೃಹಗಳ ಬುಕಿಂಗ್ಗೂ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.
ಇದೇ ಮೊದಲ ಬಾರಿಗೆ ನಂದಿಬೆಟ್ಟದಂತಹ ಪ್ರಮುಖ ಪ್ರವಾಸಿ ಸ್ಥಳದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಂಪೂರ್ಣ ರಾಜ್ಯ ಸಚಿವ ಸಂಪುಟ, ಶಾಸಕರು, ಇಲಾಖೆ ಮುಖ್ಯಸ್ಥರು ಹಾಗೂ ಪತ್ರಕರ್ತರ ಸಮ್ಮುಖದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಗತ್ಯ ಸಿದ್ಧತೆ ಹಾಗೂ ಭದ್ರತೆಗಾಗಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ನಂದಿಬೆಟ್ಟಕ್ಕೆ ಹೋಗಲು ಮತ್ತು ಬರಲು ಒಂದೇ ಮಾರ್ಗವಿರುವುದರಿಂದ, ಈ ದಿನಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಬೆಟ್ಟದ ತಿರುವುಗಳು ತೀವ್ರವಾಗಿದ್ದು, ನಿಯಂತ್ರಣ ಕಷ್ಟಕರವಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಅಪಘಾತಗಳ ಸಂಭವನೆ ಕೂಡ ಹೆಚ್ಚಾಗಬಹುದಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಬಂಧ ಹೇರಿದೆ.
ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಸರಕಾರದ ನಿರ್ಧಾರವನ್ನು ಗೌರವಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಯೋಜನೆ ಮಾಡಿಕೊಂಡವರು ತಮ್ಮ ಯೋಜನೆಗಳನ್ನು ಮುಂದೂಡುವುದು ಸೂಕ್ತ.