ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪದ ಮೇಲೆ ಟಿ.ಎಫ್. ಹಾದಿಮನಿ ಎಂಬ ವ್ಯಕ್ತಿಯ ವಿರುದ್ಧ ನಗರದ ಯಶವಂತಪುರ ಸೈಬರ್ ಕ್ರೈಂ ಠಾಣೆಗೆ ಬಿಜೆಪಿ ವತಿಯಿಂದ ದೂರು ಸಲ್ಲಿಸಲಾಗಿದೆ. ಈ ದೂರನ್ನು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ನೀಡಲಾಯಿತು. ಈ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್ ಕೂಡ ಹಾಜರಿದ್ದರು.
ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ, ಜೂನ್ 16ರ ಬೆಳಗ್ಗೆ ಟಿ.ಎಫ್. ಹಾದಿಮನಿ ಫೇಸ್ಬುಕ್ ಪುಟದಲ್ಲಿ ಪ್ರಧಾನಿ ಮೋದಿಯವರನ್ನು ಕುರಿತಾಗಿ ತೇಜೋವಧೆ ಮಾಡುವಂತೆ, ಮತ್ತು ಸಮಾಜದಲ್ಲಿ ಬಿರುಕು ಉಂಟುಮಾಡುವ ರೀತಿಯ ಹಲವಾರು ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ಗಳಲ್ಲಿ ಪ್ರಧಾನಿಯನ್ನು ಒಂದು ಮಹಿಳೆಯೊಂದಿಗೆ ತೋರಿಸುವ ಎಡಿಟ್ ಮಾಡಲಾದ ಚಿತ್ರ, ಮತ್ತು “ಸ್ವಂತ ಹೆಂಡತಿಯನ್ನೇ ಬಿಟ್ಟ ಪ್ರಧಾನಿ” ಎಂಬ ಟ್ಯಾಗ್ ಲೈನ್ ಸೇರಿದ್ದವು. ಮತ್ತೊಂದು ಪೋಸ್ಟಿನಲ್ಲಿ “ಅಮೆಚರ್” ಎಂದು ವಿವರಣೆ ನೀಡಿ ನರೇಂದ್ರ ಮೋದಿಯವರನ್ನು ನಿರ್ಲಜ್ಜವಾಗಿ ನಿಂದಿಸಲಾಗಿದೆ ಎಂದು ದೂರಲಾಗಿದೆ.
ಹಾದಿಮನಿಯ ಈ ನಡೆ ಚಾರಿತ್ರ್ಯವಧೆಗೆ ಸಮಾನವಾಗಿದೆ. ಅಲ್ಲದೆ, ಇದು ಪ್ರಧಾನಿ ಮೋದಿಯವರ ಗೌರವಕ್ಕೆ ಧಕ್ಕೆ ತರುತ್ತದೆ ಮತ್ತು ಅಭಿಮಾನಿಗಳ ಮನಸ್ಸಿಗೆ ಗಾಯ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮತ್ತು ವಿವಿಧ ಭಾರತೀಯ ದಂಡ ಸಂಹಿತೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.