Tuesday, June 17, 2025
Google search engine

HomeUncategorizedರಾಷ್ಟ್ರೀಯ"ದಕ್ಷಿಣ ಕಾಶಿ" ಪ್ರಸಿದ್ಧಿ ಕೇರಳದ ಕೊಟ್ಟಿಯೂರು ಶಿವನ ದೇವಾಲಯದಲ್ಲಿ ನಟ ದರ್ಶನ್ ಕುಟುಂಬ ಭಾಗಿ

“ದಕ್ಷಿಣ ಕಾಶಿ” ಪ್ರಸಿದ್ಧಿ ಕೇರಳದ ಕೊಟ್ಟಿಯೂರು ಶಿವನ ದೇವಾಲಯದಲ್ಲಿ ನಟ ದರ್ಶನ್ ಕುಟುಂಬ ಭಾಗಿ

ಕೇರಳ: ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷವೂ ವೈಶಾಖ ಮಾಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು “ದಕ್ಷಿಣ ಕಾಶಿ” ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕೊಟ್ಟಿಯೂರು ಶಿವನ ದೇವಾಲಯಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಸಮೇತ ಭಾಗಿಯಾಗಿ ಪೂಜೆ ಸಲ್ಲಿಸಿದರು. ನಟ ದರ್ಶನ್ ಜೊತೆ ನಟ ಧನ್ವೀರ್ ಕೂಡ ಭಾಗಿಯಾಗಿದ್ದರು.

ದೇವಾಲಯದ ಹಿನ್ನೆಲೆ:

ಕೊಟ್ಟಿಯೂರಿನಲ್ಲಿ ಎರಡು ದೇವಸ್ಥಾನಗಳಿವೆ: ಇಕ್ಕರೆ ಕೊಟ್ಟಿಯೂರು ಮತ್ತು ಅಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ದೇವಾಲಯವು ವೈಶಾಖ ಮಾಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುವ ತಾತ್ಕಾಲಿಕ ಮಂದಿರವಾಗಿದೆ, ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು ನಿಯಮಿತ ಪೂಜಾ ವಿಧಿಗಳನ್ನು ನಡೆಸುವ ಶಾಶ್ವತ ಮಂದಿರವಾಗಿದೆ. ಇಲ್ಲಿನ ವೈಶಾಖ ಮಹೋತ್ಸವ ಸುಮಾರು 28 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಜೂನ್ 8 ರಿಂದ ಪ್ರಾರಂಭವಾಗಿ ಜುಲೈ 4ರ ವರೆಗೆ ದೇವಸ್ಥಾನ ತೆರೆದಿರುತ್ತದೆ ಆದರೆ ಜೂನ್ 30ರ ನಂತರ ಮಹಿಳಾ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ ಇಲ್ಲಿ ಬರುವ ಭಕ್ತಾದಿಗಳಿಗೆ ತಂಗಲು ವಸತಿ ವ್ಯವಸ್ಥೆಯ ಸೌಲಭ್ಯವು ಇರುತ್ತದೆ. ದೇವಸ್ಥಾನವು ಬೆಳಿಗ್ಗೆ 5:00ಯಿಂದ ರಾತ್ರಿ 8.30 ರವರೆಗೆ ಮಾತ್ರ ತೆರೆದಿರುತ್ತದೆ

ಇಲ್ಲಿ ನಡೆಯುವ ಜಾತ್ರೆ “ಕೊಟ್ಟಿಯೂರು ಉತ್ಸವ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪಾರ್ವತಿಯ ತಪಸ್ಸು, ದಕ್ಷಿಣ ಯಾಗ ಮತ್ತು ಶೈವ ಪರಂಪರೆಯ ಕಥೆಗಳ ಸ್ಮರಣಾರ್ಥವಾಗಿ ಈ ಉತ್ಸವ ಆಚರಿಸಲಾಗುತ್ತದೆ.

ಕೊಟ್ಟಿಯೂರು ದೇವಾಲಯದ ವಿಶೇಷತೆ ಎಂದರೆ, ಇಲ್ಲಿನ ಪ್ರಮುಖ ಪೂಜೆಗಳು ಆಲಂಕೃತವಾದ ಶಿಲಾಮಂದಿರದಲ್ಲಲ್ಲ, ಬದಲಾಗಿ ನದಿ ತೀರದ ತಾತ್ಕಾಲಿಕ ಸನ್ನಿಧಿಯಲ್ಲಿ ನಡೆಯುತ್ತವೆ. ಇದು ದೇವಾಲಯಕ್ಕೆ ವಿಭಿನ್ನ ಶೈಲಿಯ ಮಹತ್ವವನ್ನು ನೀಡುತ್ತದೆ. ಉತ್ಸವದ ವೇಳೆ ಯಾವುದೇ ವಿಗ್ರಹಾರಾಧನೆ ಇಲ್ಲ; ಬದಲಾಗಿ ಸ್ವಯಂಭು ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಈ ದೇವಾಲಯದ ಪ್ರಮುಖ ಪೂಜಾ ವಿಧಿಗಳಲ್ಲಿ ‘ನೆಯ್ಯತ್ತಂ’ ಮತ್ತು ‘ಏಲನೇರತ್ತಂ’ ಸೇರಿವೆ. ‘ಏಲನೇರತ್ತಂ’ ಪೂಜೆಯಲ್ಲಿ ಸಾವಿರಾರು ತಾಜಾ ತೆಂಗಿನಕಾಯಿ ನೀರನ್ನು ದೇವರ ಮೇಲಿಗೆ ಅರ್ಪಿಸಲಾಗುತ್ತದೆ, ಇದು ಭಕ್ತರ ಧಾರ್ಮಿಕ ಭಾವನೆಗಳನ್ನು ಹೆಚ್ಚಿಸುತ್ತದೆ.

ಕೊಟ್ಟಿಯೂರು ದೇವಾಲಯವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದಿಂದ ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ಇಲ್ಲಿ ನಡೆಯುವ ವೈಶಾಖ ಮಾಹೋತ್ಸವವು ದೇಶಾದ್ಯಾಂತ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಉತ್ಸವವಾಗಿದೆ.

RELATED ARTICLES
- Advertisment -
Google search engine

Most Popular