ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಜಪ್ಪಿನಮೊಗರು ಪ್ರದೇಶದ ನಾಗಲ್ಲು ಉರುಂಡೆತೋಟ ಪ್ರದೇಶದಲ್ಲಿ ವಿಪರೀತ ಮಳೆಯಿಂದ ರಾಜ ಕಾಲುವೆಯ ತಡಗೋಡೆ ನಾಶವಾಗಿದ್ದು ಕೂಡಲೇ ಇದರ ದುರಸ್ತಿ ಕಾರ್ಯ ನಡೆಯಬೇಕೆಂದು ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಸುಧಾಕರ್.ಜೆ. ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ನಾಗಲ್ಲು ಗಣೇಶನಗರ, ಹೊಯ್ಗೆ ರಾಶಿ, ವೈದ್ಯನಾಥನಗರ, ಬಜೆಹಿತ್ತಲು, ಅಂಗಡಿಮಾರು. ಪ್ರದೇಶಗಳಿಗೆ ಕೃತಕ ನೆರೆ ಬಂದು ಸಂಪೂರ್ಣ ಜಪ್ಪಿನಮೊಗರು ಗ್ರಾಮವೇ ಜಲಾವೃತಗೊಂಡು ಅಪಾರ ಪ್ರಮಾಣದ ಸೊತ್ತುಹಾನಿ ಉಂಟಾದ ಬಗ್ಗೆ ಹಾಗೂ ಸ್ಥಳೀಯ ಶಾಸಕರು ಹಾಗೂ ನಿಕಟಪೂರ್ವ ಕಾರ್ಪೊರೇಟರ್ ಜವಾಬ್ದಾರಿಯಿಂದ ನುಣಚಿಕೊಳ್ಳುವ ನೆಪದಲ್ಲಿ ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳಿಗೆ ಅಸಂಬದ್ಧ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು. ಕಳೆದ 20-25 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಕಂಕನಾಡಿ ಪಂಪ್ವೆಲ್, ಎಕ್ಕೂರು ಮುಖಾಂತರ ಜಪ್ಪಿನಮೊಗರು ಪ್ರದೇಶದಲ್ಲಿ ಹಾದುಹೋಗುವ ರಾಜ ಕಾಲುವೆ ನಾಗಲ್ಲು ಉರುಂಡೆತೋಟ ಎಂಬಲ್ಲಿ ಸುಮಾರು 25 ಮೀಟರ್ಗಳಷ್ಟು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಇದರಿಂದಾಗಿ ಜಪ್ಪಿನಮೊಗರು ಗ್ರಾಮದ ಹಲವಾರು ಪ್ರದೇಶಗಳು ಜಲಾವೃತಗೊಂಡು ಅಲ್ಲಿರುವ ಮನೆ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳು ನಷ್ಟವಾಗಿದೆ. ಕಳೆದ 15 ದಿನಗಳಲ್ಲಿ ಮೂರು ನಾಲ್ಕು ಬಾರಿ ನೆರೆ ಉಂಟಾಗುತ್ತ ಇದೆ . ಈ ಕೃತಕ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂಡಲೇ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.