ರಾಮನಗರ: ಕರ್ನಾಟಕದಲ್ಲಿ ಜಾನುವಾರುಗಳ ಮೇಲೆ ನಡೆಯುತ್ತಿರುವ ಕ್ರೌರ್ಯದ ಶ್ರೇಣಿ ದಿನದಿಂದ ದಿನಕ್ಕೆ ಹೆಚ್ಚು ಬೆಳಕಿಗೆ ಬರುತ್ತಿದ್ದು, ಇದೀಗ ರಾಮನಗರ ಜಿಲ್ಲೆಯಲ್ಲೂ ಹಸುವಿನ ಮೇಲೆ ದುಷ್ಕರ್ಮಿಗಳಿಂದ ಅಮಾನುಷ ಕೃತ್ಯ ನಡೆದಿದೆ. ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಈ ಅಮಾನುಷ ಘಟನೆ ಬೆಂಗಳೂರಿನ ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದಲ್ಲಿನ ಹಾಲಿನ ಡೇರಿ ಅಧ್ಯಕ್ಷರಾಗಿರುವ ಮರಿಬಸವಯ್ಯ ಅವರಿಗೆ ಸೇರಿದ ಹಸು ಗುರುಸಿದ್ದಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಸಂದರ್ಭ, ದುಷ್ಕರ್ಮಿಗಳು ಹಸುವಿನ ಕೆಚ್ಚಲು ಸಂಪೂರ್ಣವಾಗಿ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ.
ಮರಿಬಸವಯ್ಯ ಮತ್ತು ಗುರುಸಿದ್ದಪ್ಪ ನಡುವಿನ ವೈಮನಸ್ಸು ಹಿನ್ನಲೆಯಲ್ಲಿ ಈ ಕೃತ್ಯ ನಡೆಯಿತೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಡೇರಿ ಅಧ್ಯಕ್ಷರ ಚುನಾವಣೆಯ ವೇಳೆ ಇವರ ನಡುವೆ ರಾಜಕೀಯ ತರ್ಕವು ಉಂಟಾಗಿ, ವೈಷಮ್ಯ ತೀವ್ರಗೊಂಡಿರುವುದು ಸ್ಥಳೀಯ ಮೂಲಗಳ ಹೇಳಿಕೆ. ಈ ಕಾರಣದಿಂದ ಗುರುಸಿದ್ದಪ್ಪ ವಿರುದ್ಧ ಆರೋಪವಿದೆ ಎಂದು ಮರಿಬಸವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.